ನಿಲ್ಲದ ಕಾಡಾನೆಗಳ ಹಾವಳಿ; ಮೂಡಿಗೆರೆಯಲ್ಲಿ ಶಾಶ್ವತ ಆನೆ ಶಿಬಿರ ಆರಂಭಿಸಲು ಆಗ್ರಹ
ಮೂಡಿಗೆರೆ ಡಿ.21: ಕಾಡಾನೆಗಳ ಉಪಟಳ ತಪ್ಪಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಶಾಶ್ವತವಾಗಿ ಆನೆ ಶಿಬಿರ ಆರಂಭಿಸಬೇಕೆಂದು ಕಾಡಾನೆಗಳ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕರಾದ ಎಂ.ಕೆ.ಸದಾಶಿವ ಮೂಲರಹಳ್ಳಿ, ಎಸ್.ಎ.ವಾಸುದೇವ ಸತ್ತಿಗನಹಳ್ಳಿ ಆಗ್ರಹಿಸಿದ್ದಾರೆ.
ಈ ಸಂಬಂಧ ಬುಧವಾರ ಹೇಳಿಕೆ ನೀಡಿರುವ ಅವರು, 'ಕಳೆದ ಅನೇಕ ವರ್ಷಗಳಿಂದ ತಾಲೂಕಿನ ಊರುಬಗೆ ಮತ್ತು ತ್ರಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದರು. ಈಗ ಭೈರ ಎಂಬ ಕಾಡಾನೆಯನ್ನು ಹಿಡಿದು ಸಾಗಿಸಿರುವುದರಿಂದ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಭಾಗದಲ್ಲಿ ಇನ್ನೂ 3 ಕಾಡಾನೆಗಳಿದ್ದು, ಪ್ರತಿದಿನ ತೋಟಗಳಿಗೆ ದಾಳಿ ಮಾಡಿ ಬೆಳೆನಾಶಪಡಿಸುತ್ತಿವೆ. ಈ ಆನೆಗಳನ್ನೂ ಸೆರೆ ಹಿಡಿದು ಬೇರೆಡೆಗೆ ಸಾಗಿಸಬೇಕು. ಇದಕ್ಕಾಗಿ ತಾಲೂಕಿನಲ್ಲಿ ಶಾಶ್ವತವಾಗಿ ಆನೆ ಶಿಬಿರವೊಂದನ್ನು ಆರಂಭಿಸಬೇಕು' ಎಂದು ಆಗ್ರಹಿಸಿದ್ದಾರೆ.
'ತಾಲೂಕಿನಲ್ಲಿ ನರಹಂತಕ ಕಾಡಾನೆ ಎಂದೇ ಕುಖ್ಯಾತಿ ಪಡೆದಿದ್ದ ಭೈರನನ್ನು ಸೆರೆ ಹಿಡಿಯಲು ಆದೇಶ ನೀಡಿದ ರಾಜ್ಯ ಸರಕಾರ, ಅದಕ್ಕೆ ಕಾರಣಕರ್ತರಾದ ಶಾಸಕ ಎಂ.ಪಿ.ಕುಮಾರಸ್ವಾಮಿ, ಎಂಎಲ್ಸಿ ಎಂ.ಕೆ.ಪ್ರಾಣೇಶ್, ಸೆರೆ ಹಿಡಿಯಲು ಶ್ರಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಮಾವುತರು, ಅಭಿಮನ್ಯು ಸೇರಿದಂತೆ 6 ಸಾಕು ಆನೆಗಳು, ಸಹಕರಿಸಿದ ಊರುಬಗೆ, ಯು.ಹೊಸಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಪ್ರತಿಭಟಿನಾಕಾರರು, ಕಾಡಾನೆಗಳ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ' ಅವರು ತಿಳಿಸಿದ್ದಾರೆ.