ಆಂಧ್ರ ಪ್ರದೇಶ: ಚಂದ್ರಬಾಬು ನಾಯ್ಡು ಚುನಾವಣಾ ರ್ಯಾಲಿಯಲ್ಲಿ ಮತ್ತೆ ದುರಂತ; ಕಾಲ್ತುಳಿತಕ್ಕೆ ಮೂವರು ಬಲಿ
ಗುಂಟೂರು: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ndtv.com ವರದಿ ಮಾಡಿದೆ. ಇದು ನಾಯ್ಡು ಅವರ ಕಾರ್ಯಕ್ರಮಗಳಲ್ಲಿ ಜನರು ಪ್ರಾಣ ಕಳೆದುಕೊಂಡ ಎರಡನೇ ಘಟನೆಯಾಗಿದೆ. 2024 ರ ವಿಧಾನಸಭಾ ಚುನಾವಣೆಯ ತಯಾರಿಗಾಗಿ ರಾಜ್ಯಾದ್ಯಂತ ಸರಣಿ ರಾಜಕೀಯ ಸಭೆಗಳನ್ನು ನಡೆಸುತ್ತಿರುವ ನಾಯ್ಡು ಅವರ ಕಾರ್ಯಕ್ರಮದಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಇಂತಹದ್ದೇ ಘಟನೆ ವರದಿಯಾಗಿತ್ತು.
ಗುಂಟೂರಿನಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಎಲ್ಲ ರೀತಿಯ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ ರೆಡ್ಡಿ, ಸಂತ್ರಸ್ತರ ಕುಟುಂಬಕ್ಕೆ ಬೆಂಬಲದ ಭರವಸೆ ನೀಡಿದ್ದಾರೆ.
ಬುಧವಾರ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಅವರ ರೋಡ್ಶೋ ವೇಳೆ ಮಹಿಳೆ ಸೇರಿದಂತೆ ಎಂಟು ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ನಾಯ್ಡು ಅವರು ಸಭೆಯನ್ನು ತಕ್ಷಣವೇ ರದ್ದುಗೊಳಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ₹ 24 ಲಕ್ಷ ಪರಿಹಾರವನ್ನು ಘೋಷಿಸಿದ್ದರು.
"ಇದೊಂದು ದುಃಖದ ಘಟನೆ. ಇದರ ಬಗ್ಗೆ ನನಗೆ ತುಂಬಾ ವಿಷಾದವಿದೆ" ಎಂದು ಅವರು ಹೇಳಿದ್ದಾರೆ. "ನಾವು ಆರ್ಥಿಕ ನೆರವು, ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುತ್ತೇವೆ" ಎಂದು ಅವರು ಹೇಳಿದರು.
ಆದಾಗ್ಯೂ, ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಇದನ್ನು "ನಕಲಿ ಪ್ರಚಾರ" ಎಂದು ತೀವ್ರವಾಗಿ ಟೀಕಿಸಿದೆ.