ನಿರ್ಣಾಯಕ ಚುನಾವಣೆಗಳನ್ನು ಎದುರಿಸಲು ಸಿದ್ದತೆ: ಮೋದಿ ಸಂಪುಟ ಪುನಾರಚನೆ ಸನ್ನಿಹಿತ
ಹೊಸದಿಲ್ಲಿ,ಜ.1: ಹತ್ತು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಹಾಗೂ 2024ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಪೂರ್ವಸಿದ್ಧತೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಜನವರಿ 15 ಹಾಗೂ 25ರೊಳಗೆ ತನ್ನ ಸಚಿವ ಸಂಪುಟವನ್ನು ಪುನಾರಚಿಸುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ವಿಧಾನಸಭಾ ಚುನಾವಣೆಗೆ ತೆರಳಲಿರುವ ರಾಜ್ಯಗಳ ಕೆಲವು ಸಂಸದರನ್ನು ಅವರು ಸಂಪುಟಕ್ಕೆ ಸೇರ್ಪಡೆಗೊಳಿಸುವ ನಿರೀಕ್ಷೆಯಿದೆೆ. ಲೋಕಸಭೆಯ ಬಜೆಟ್ ಅಧಿವೇಶನ ಆರಂಭಗೊಳ್ಳುವ ಮುನ್ನ ಪ್ರಧಾನಿಯವರು ಸಂಪುಟ ವಿಸ್ತರಣೆ ನಡೆಸುವ ಸಾಧ್ಯತೆಗಳು ದಟ್ಟವಾಗಿರುವುದಾಗಿ ಮೂಲಗಳು ಹೇಳಿವೆ.
ತೆಲಂಗಾಣ ಹಾಗೂ ಈಶಾನ್ಯ ಭಾರತದ ನಾಲ್ಕು ರಾಜ್ಯಗಳಾದ ತ್ರಿಪುರ,ಮಣಿಪುರ, ಮಿರೆರಾಂ ಹಾಗೂ ನಾಗಾಲ್ಯಾಂಡ್ ರಾಜ್ಯದವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆಯೆನ್ನಲಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸದೆ ಇರುವ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ. ಮುಖ್ತಾರ್ ಅಬ್ಬಾಸ್ ನಕ್ವಿ, ರವಿಶಂಕರ್ ಪ್ರಸಾದ್ ಮತ್ತಿತರರಿಗೆ ಇತ್ತೀಚೆಗೆ ಪಕ್ಷದ ಹೊಣೆಗಾರಿಕೆಯನ್ನು ನೀಡಿದ ರೀತಿಯಲ್ಲೇ ಸಂಪುಟದಿಂದ ಕೈಬಿಡಲಾಗುವ ಸಚಿವರಿಗೆ ಪಕ್ಷಲ್ಲಿ ಪ್ರಮುಖ ಸಂಘಟನಾ ಹೊಣೆಗಾರಿಕೆಗಳನ್ನು ವಹಿಸಲಾಗುವುದು ಎಂಬುದಾಗಿಯೂ ಹೇಳಲಾಗುತ್ತಿದೆ.
ಪಕ್ಷದಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆಯನ್ನು ತೋರಿದ ಹಾಗೂ ಮತದಾರರ ಕೆಲವು ನಿರ್ದಿಷ್ಟ ವರ್ಗಗಳ ಮೇಲೆ ಸಾಕಷ್ಟು ಪ್ರಭಾವ ಹೊಂದಿರುವ ಸುಮಾರು 4ರಿಂದ 5 ಮಂದಿ ಲೋಕಸಭಾ ಸದಸ್ಯರಿಗೆ ಸಂಪುಟದಲ್ಲಿ ಸ್ಥಾನ ದೊರೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.
ಆದಾಗ್ಯೂ ಸಂಪುಟ ಪುನಾರಚನೆಗೆ ಮುನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಅವರನ್ನು ಮುಂದುವರಿಸುವ ಬಗ್ಗೆಯೂ ಬಿಜೆಪಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ನಿರೀಕ್ಷೆಯಿದೆಯೆಂದು ಮೂಲಗಳು ತಿಳಿಸಿವೆ.