ಶಿಕ್ಷಣ ನೀತಿಯಡಿ‘ಬ್ಯಾಗ್ ಇಲ್ಲದ ದಿನಗಳಿಗೆ’ಪ್ರತಿ ವಿದ್ಯಾರ್ಥಿಗೆ 4.44 ರೂ.ಅನುದಾನ:ಟೀಕೆಗೆ ಗುರಿಯಾದ ಗುಜರಾತ್ ಸರಕಾರ
ಅಹ್ಮದಾಬಾದ್,ಜ.4: ನೂತನ ಶಿಕ್ಷಣ ನೀತಿಯ ಭಾಗವಾಗಿ 10 ‘ಬ್ಯಾಗ್ರಹಿತ ದಿನಗಳನ್ನು ’ಹೊಂದಿರುವ ಶಾಲೆಗಳ ಪರಿಕಲ್ಪನೆಯ ಅನುಷ್ಠಾನಕ್ಕಾಗಿ ಹಂಚಿಕೆ ಮಾಡಿರುವ ಅತ್ಯಲ್ಪ ಮೊತ್ತಕ್ಕಾಗಿ ಗುಜರಾತ ಸರಕಾರವು ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.
ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಲು ಶೈಕ್ಷಣಿಕ ಕ್ಯಾಲೆಂಡರ್ನಲ್ಲಿ ‘ಬ್ಯಾಗ್ ರಹಿತ ದಿನಗಳನ್ನು’ ಸೇರಿಸಲು ಕೇಂದ್ರ ಸರಕಾರವು ಪ್ರಸ್ತಾವಿಸಿತ್ತು. ಸಂಪುಟ ಸಭೆಯಲ್ಲಿ ಈ ಪರಿಕಲ್ಪನೆಗೆ ಒಪ್ಪಿಗೆ ನೀಡಿದ್ದ ಭೂಪೇಂದ್ರ ಪಟೇಲ್ ಸರಕಾರವು ಪ್ರತಿ ವಿದ್ಯಾರ್ಥಿಗೆ ಪ್ರತಿ ಬ್ಯಾಗ್ರಹಿತ ದಿನಕ್ಕೆ ಕೇವಲ 4.44 ರೂ.ಗಳನ್ನು ನಿಗದಿಗೊಳಿಸುವ ಮೂಲಕ ನಗೆಪಾಟಲಿಗೆ ಗುರಿಯಾಗಿದೆ.
ನೂತನ ಉಪಕ್ರಮದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಗುಜರಾತಿನ ಪ್ರಾಥಮಿಕ, ಪ್ರೌಢ ಮತ್ತು ವಯಸ್ಕ ಶಿಕ್ಷಣ ಸಚಿವ ಡಾ.ಕುಬೇರ ದಿಂಡೋರ್ ಅವರು, ಬ್ಯಾಗ್ ರಹಿತ ದಿನಗಳಲ್ಲಿ ವಿದ್ಯಾರ್ಥಿಗಳು ತೋಟಗಾರಿಕೆ, ಬಡಿಗತನ, ಕುಂಬಾರಿಕೆ, ಮೆಟಲ್ ಫ್ಯಾಬ್ರಿಕೇಷನ್ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಇಂತಹ ದಿನಗಳಲ್ಲಿ ವಿದ್ಯಾರ್ಥಿಗಳನ್ನು ವಸ್ತುಸಂಗ್ರಹಾಲಯಗಳು ಮತ್ತು ಪಾರಂಪರಿಕ ತಾಣಗಳ ಪ್ರವಾಸಕ್ಕೆ ಕರೆದೊಯ್ಯಬೇಕು ಎಂದೂ ನೀತಿಯು ಸೂಚಿಸಿದೆ ಎಂದು ಹೇಳಿದ್ದಾರೆ.
ತಾಂತ್ರಿಕ ಶಿಕ್ಷಣ ಸಚಿವ ಋಷಿಕೇಶ ಪಟೇಲ್ ಪ್ರಕಾರ ಶಾಲೆಗಳು ಕ್ರೀಡಾಕೂಟಗಳು, ರಾಷ್ಟ್ರೀಯ ಉತ್ಸವಗಳ ಆಚರಣೆ ಅಥವಾ ಕುಶಲಕರ್ಮಿಗಳೊಂದಿಗೆ ಸಭೆಗಳನ್ನೂ ಆಯೋಜಿಸಬಹುದು.
ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಜನವರಿ ಮೊದಲ ವಾರದಲ್ಲಿ ರಾಜ್ಯದಲ್ಲಿಯ 491 ಮತ್ತು ಜನವರಿ ಕೊನೆಯ ವಾರದಲ್ಲಿ 1,009 ಉನ್ನತ ಪ್ರಾಥಮಿಕ ಶಾಲೆಗಳಲ್ಲಿ ಬ್ಯಾಗ್ರಹಿತ ದಿನಗಳನ್ನು ಜಾರಿಗೊಳಿಸಲಾಗುವುದು. ಇದಕ್ಕಾಗಿ ಎರಡು ಕೋ. ರೂ.ಗಳ ಅನುದಾನವನ್ನು ನಿಗದಿಗೊಳಿಸಲಾಗಿದ್ದು,ಪ್ರತಿ ಶಾಲೆಗೆ 15,000 ರೂ.ಗಳನ್ನು ನೀಡಲಾಗುವುದು ಎಂದು ಪಟೇಲ್ ತಿಳಿಸಿದರು.
ಆದರೆ ಈ ಮೊತ್ತ ತೀರ ಕಡಿಮೆ ಎಂದು ಹೇಳಲಾಗುತ್ತಿದೆ. ಪ್ರತಿ ತರಗತಿಯಲ್ಲಿಯ ತಲಾ 50 ವಿದ್ಯಾರ್ಥಿಗಳನ್ನು ಹೊಂದಿರುವ ಎರಡು ಸೆಕ್ಷನ್ಗಳನ್ನು ಪರಿಗಣಿಸಿದರೆ ಒಟ್ಟು 300 ಫಲಾನುಭವಿ ವಿದ್ಯಾರ್ಥಿಗಳಾಗುತ್ತಾರೆ. ಎರಡು ಹಂತಗಳಲ್ಲಿ ಒಟ್ಟು 1,500 ಶಾಲೆಗಳಲ್ಲಿ ಯೋಜನೆಯು ಜಾರಿಗೊಳ್ಳಲಿದೆ,ಅಂದರೆ ಒಟ್ಟು 4.50 ಲ.ವಿದ್ಯಾರ್ಥಿಗಳನ್ನು ಈ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. ಎರಡು ಕೋ.ರೂ.ಗಳ ಅನುದಾನ ನಿಗದಿಗೊಳಿಸಿರುವುದು ಪ್ರತಿ ವಿದ್ಯಾರ್ಥಿಗೆ ಪ್ರತಿ ಬ್ಯಾಗ್ರಹಿತ ದಿನಕ್ಕೆ 4.44 ರೂ.ಗಳನ್ನು ಮಾತ್ರ ಒದಗಿಸುತ್ತದೆ ಎಂದು ಅಹ್ಮದಾಬಾದ್ನ ಬರೇಜಿಯಾ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಗುಜರಾತ್ ಪ್ರಾಥಮಿಕ ಶಿಕ್ಷಕ ಸಂಘದ ಪದಾಧಿಕಾರಿ ನರೇಂದ್ರ ಗೋಹಿಲ್ ತಿಳಿಸಿದರು.
ಗ್ರಾಮಗಳಲ್ಲಿ ಕಡಿಮೆ ಮಕ್ಕಳು ಶಾಲೆಗಳಿಗೆ ಹೋಗುತ್ತಾರೆ ಎಂದು ಭಾವಿಸಿದರೆ ಮತ್ತು ಪ್ರತಿ ಶಾಲೆಗೆ ಸರಾಸರಿ 60 ಮಕ್ಕಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಆಗಲೂ ಈ ಬಜೆಟ್ ತುಂಬ ಕಡಿಮೆಯಾಗುತ್ತದೆ. ಇಷ್ಟೊಂದು ಅಲ್ಪಹಣದಲ್ಲಿ ವಿದ್ಯಾರ್ಥಿಗಳು ಯಾವ ರೀತಿಯ ತರಬೇತಿಯನ್ನು ಪಡೆಯುತ್ತಾರೆ ’ಎಂದು ಮಾಜಿ ಜಿಲ್ಲಾ ಶಿಕ್ಷಣಾಧಿಕಾರಿ ಕುಸುಮಾಂಶು ಪೋಟಾ ಪ್ರಶ್ನಿಸಿದರು.
ಇಡೀ ಪ್ರಕಟಣೆಯೇ ಒಂದು ತಮಾಷೆಯಾಗಿದೆ ಎಂದು ಬಣ್ಣಿಸಿದ ಸೂರತ್ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆಯ ಮಾಜಿ ಪ್ರಾಂಶುಪಾಲ ಗೋವಿಂದ ಮೊಧೇರಾ ಅವರು,ಶಾಲೆಗಳು ತಜ್ಞರೋರ್ವರನ್ನು ಕರೆಸಿದರೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ಸಾವಿರ ರೂ.ವೆಚ್ಚವಾಗುತ್ತದೆ. ವಸ್ತುಸಂಗ್ರಹಾಲಯಗಳು ಮತ್ತು ಇತರ ಸ್ಥಳಗಳಿಗೆ ಪ್ರವಾಸಗಳು ಪ್ರಯಾಣ,ಟಕೆಟ್ಗಳು ಮತ್ತು ಏನಾದರೂ ಉಪಾಹಾರದ ವೆಚ್ಚಗಳನ್ನು ಒಳಗೊಂಡಿರುತ್ತವೆ. ಗುಜರಾತಿನಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸರಕಾರವು ತಮಾಷೆ ಮಾಡಿರುವುದು ಇದೇ ಮೊದಲಲ್ಲ.
ಅದು ಈ ಹಿಂದೆ ಸರಕಾರಿ ಶಾಲೆಗಳ ಮಕ್ಕಳ ಸಮವಸ್ತ್ರಗಳಿಗೆ 150 ರೂ. ಮತ್ತು ಶಾಲಾ ಪ್ರವೇಶೋತ್ಸವಕ್ಕೆ 500 ರೂ.ಗಳನ್ನು ಹಂಚಿಕೆ ಮಾಡಿತ್ತು ಎಂದು ಹೇಳಿದರು.