ಕುಸಿಯುತ್ತಿರುವ ಉತ್ತರಾಖಂಡದ ನೆಲ; ಬಿರುಕು ಬಿಟ್ಟಿರುವ ಮನೆಗಳು
ಜೋಶಿಮಠ (ಉತ್ತರಾಖಂಡ), ಜ. 5: ಉತ್ತರಾಖಂಡದ ಜೋಶಿಮಠದಲ್ಲಿ ನೆಲವು ನಿರಂತರವಾಗಿ ಕುಸಿಯುತ್ತಿರುವುದರ ಪರಿಣಾಮವಾಗಿ, ಕನಿಷ್ಠ 570 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಹವಾಮಾನ ಮತ್ತು ಮೂಲಸೌಕರ್ಯ ಬದಲಾವಣೆಗಳ ಪರಿಣಾಮವಾಗಿ ನೆಲವು ನಿಧಾನವಾಗಿ ಕೆಳಗೆ ಜಗ್ಗುತ್ತಿದೆ ಎನ್ನಲಾಗಿದೆ. ಇದರಿಂದ ಭೀತಿಗೊಂಡಿರುವ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ಪಟ್ಟಣವನ್ನು ತೊರೆದಿವೆ.
ಜಿಲ್ಲಾಡಳಿತವು ಬುಧವಾರ 29 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 500 ಕುಟುಂಬಗಳು ಅಸ್ಥಿರಗೊಂಡಿರುವ ಮನೆಗಳಲ್ಲೇ ಇನ್ನೂ ವಾಸಿಸುತ್ತಿದ್ದು, ಪ್ರಾಣಾಪಾಯವನ್ನು ಎದುರಿಸುತ್ತಿವೆ. ಕೊರೆಯುವ ಚಳಿಯಲ್ಲಿ ವಾಸ್ತವ್ಯ ಹೂಡಬಹುದಾದ ಸ್ಥಳವನ್ನು ಕುಟುಂಬಗಳು ಅರಸುತ್ತಿವೆ ಎನ್ನಲಾಗಿದೆ.
3,000ಕ್ಕೂ ಅಧಿಕ, ಅಂದರೆ ಪಟ್ಟಣದ ಜನಸಂಖ್ಯೆಯ 10 ಶೇಕಡಕ್ಕಿಂತಲೂ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಜೋಶಿಮಠ ಮುನಿಸಿಪಾಲಿಟಿ ಅಧ್ಯಕ್ಷ ಶೈಲೇಂದ್ರ ಪವಾರ್ ಹೇಳುತ್ತಾರೆ. ‘‘ಮುನಿಸಿಪಾಲಿಟಿಯು ಎಲ್ಲಾ ಮನೆಗಳ ಸಮೀಕ್ಷೆಗಳನ್ನು ನಡೆಸಿದೆ. ತುಂಬಾ ಮಂದಿ ತಮ್ಮ ಮನೆಗಳನ್ನು ತೊರೆದು ಹೋಗಿದ್ದಾರೆ’’ ಎಂದು ಅವರು ಹೇಳಿದರು.
ಇಲ್ಲಿನ ರಸ್ತೆಗಳೂ ಬಿರುಕು ಬಿಟ್ಟಿವೆ. ಮುನಿಸಿಪಾಲಿಟಿಯ ಎಲ್ಲಾ ಒಂಭತ್ತು ವಾರ್ಡ್ಗಳಲ್ಲಿ ಈ ಸಮಸ್ಯೆಯಿದೆ.
ಸಮಸ್ಯೆಯ ಅಧ್ಯಯನಕ್ಕಾಗಿ ಐಐಟಿ ರೂರ್ಕೀಯ ತಜ್ಞರು ಪಟ್ಟಣಕ್ಕೆ ಆಗಮಿಸಿದ್ದಾರೆ. ಅವರು ತಮ್ಮ ವರದಿಗಳನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಕಳುಹಿಸಲಿದ್ದಾರೆ.
ಜೋಶಿಮಠಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತೇನೆ ಎಂದು ಮುಖ್ಯಮಂತ್ರಿ ಧಾಮಿ ಹೇಳಿದ್ದಾರೆ.
‘‘ನಮ್ಮನ್ನು ತಕ್ಷಣ ಇಲ್ಲಿಂದ ಸ್ಥಳಾಂತರಿಸಬೇಕು ಎಂಬುದಾಗಿ ನಾವು ಒಂದು ವರ್ಷದಿಂದ ಒತ್ತಾಯಿಸುತ್ತಿದ್ದೇವೆ. ಆದರೆ, ನಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ’’ ಎಂದು ಜೋಶಿಮಠ ಉಳಿಸಿ ಸಮಿತಿಯ ಸಂಚಾಲಕ ಅತುಲ್ ಸಾಟಿ ಹೇಳಿದ್ದಾರೆ. ‘‘ಜೋಶಿಮಠದ ತಳ ಜಗ್ಗುತ್ತಿದೆ. ಜನರು ತಮ್ಮ ಮನೆಗಳಿಗೆ ಬಿದಿರಿನ ಕಂಬದ ಆಸರೆಯನ್ನು ನೀಡುತ್ತಿದ್ದಾರೆ ಹಾಗೂ ಬಿರುಕುಗಳನ್ನು ಚಿಂದಿ ಬಟ್ಟೆಗಳಿಂದ ಮುಚ್ಚುತ್ತಿದ್ದಾರೆ. ಆದರೆ ರಾಜ್ಯ ಸರಕಾರಕ್ಕೆ ಕಾಳಜಿಯಿಲ್ಲ’’ ಎಂದು ಅವರು ಹೇಳಿದರು.