ದಿಲ್ಲಿ ಪೊಲೀಸರು ದ್ವೇಷ ಭಾಷಣದ ವಿಚಾರಣೆಯಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯನ್ನು ಮಾಡಿಲ್ಲ: ಸುಪ್ರೀಂ ಕೋರ್ಟ್
2021ರ ಹಿಂದುತ್ವ ಕಾರ್ಯಕ್ರಮ
ಹೊಸದಿಲ್ಲಿ: ಹಿಂದು ಯುವ ವಾಹಿನಿಯು ದಿಲ್ಲಿಯಲ್ಲಿ 2021, ಡಿ.19ರಂದು ಆಯೋಜಿಸಿದ್ದ ಹಿಂದುತ್ವ ಕಾರ್ಯಕ್ರಮದಲ್ಲಿ ಮಾಡಲಾಗಿದ್ದ ದ್ವೇಷ ಭಾಷಣ (hate speech) ಕುರಿತು ತನಿಖೆಯಲ್ಲಿ ದಿಲ್ಲಿ ಪೊಲೀಸರು (Delhi Police) ಹೇಳಿಕೊಳ್ಳುವಂತಹ ಪ್ರಗತಿಯನ್ನು ಸಾಧಿಸಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಬೆಟ್ಟು ಮಾಡಿದೆ.
ಕಾರ್ಯಕ್ರಮದಲ್ಲಿ ಸುದರ್ಶನ ನ್ಯೂಸ್ ಟಿವಿ ಚಾನೆಲ್ನ ಮುಖ್ಯ ಸಂಪಾದಕ ಸುರೇಶ್ ಚಾವಂಕೆಯವರು ಭಾರತವನ್ನು ‘ಹಿಂದು ರಾಷ್ಟ್ರ’ವನ್ನಾಗಿ ಮಾಡಲು ‘ಪ್ರಾಣತ್ಯಾಗ ಅಥವಾ ಹತ್ಯೆ’ಗಾಗಿ ಜನರ ಗುಂಪೊಂದಕ್ಕೆ ಶಪಥವನ್ನು ಬೋಧಿಸಿದ್ದರು. ಸುಮಾರು ಐದು ತಿಂಗಳುಗಳ ಬಳಿಕ 2022 ಮೇ 4ರಂದು ಈ ಬಗ್ಗೆ ಎಫ್ಐಆರ್ ದಾಖಲಾಗಿತ್ತು.
ಸಾಮಾಜಿಕ ಕಾರ್ಯಕರ್ತ ತುಷಾರ ಗಾಂಧಿಯವರು ದ್ವೇಷ ಭಾಷಣ ಮತ್ತು ಹತ್ಯೆಗಳಿಗೆ ಕಡಿವಾಣ ಹಾಕಲು ನಿಗದಿಗೊಳಿಸಲಾಗಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳದ್ದಕ್ಕಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಪಿ.ಎಸ್.ನರಸಿಂಹ ಅವರ ಪೀಠವು ಶುಕ್ರವಾರ ಕೈಗೆತ್ತಿಕೊಂಡಿತ್ತು.
ಅವರು (ಪೊಲೀಸರು) ಯಾರನ್ನೂ ಬಂಧಿಸಿಲ್ಲ, ದೋಷಾರೋಪ ಪಟ್ಟಿಯನ್ನು ಸಲ್ಲಿಸಿಲ್ಲ ಎಂದು ಗಾಂಧಿ ಪರ ವಕೀಲ ಶಾದಾನ್ ಫರಾಸತ್ ಅವರು ಪೀಠಕ್ಕೆ ತಿಳಿಸಿದರು.
ಎಫ್ಐಆರ್ ದಾಖಲಾತಿಯಲ್ಲಿ ವಿಳಂಬದ ಕುರಿತು ದಿಲ್ಲಿ ಪೊಲೀಸರ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರನ್ನು ಪ್ರಶ್ನಿಸಿದ ಮು.ನ್ಯಾ.ಚಂದ್ರಚೂಡ್, ‘ಮೇ 4ರ ಬಳಿಕ ಎಂಟು ತಿಂಗಳುಗಳು ಕಳೆದಿವೆ. ನೀವು ಯಾವ ಪ್ರಗತಿಯನ್ನು ಮಾಡಿದ್ದೀರಿ? ಐದು ತಿಂಗಳುಗಳ ಬಳಿಕ ನೀವು ಎಫ್ಐಆರ್ ದಾಖಲಿಸಿಕೊಂಡಿದ್ದೀರಿ ಮತ್ತು ಅದರ ಬಳಿಕ ಎಂಟು ತಿಂಗಳುಗಳು ಕಳೆದರೂ ಯಾವುದೇ ಗಣನೀಯ ಪ್ರಗತಿಯಾಗಿಲ್ಲ. ಈ ಬಗ್ಗೆ ನೀವು ನಮಗೆ ಹೇಳಬೇಕು ’ ಎಂದರು.
ವಿಷಯವು ತುಂಬ ಗಂಭೀರವಾಗಿದೆ ಎಂದು ಹೇಳಿದ ಫರಾಸತ್, ಕಾರ್ಯಕ್ರಮದಲ್ಲಿ ಮಾಡಲಾಗಿದ್ದ ಭಾಷಣದ ಲಿಪ್ಯಂತರವನ್ನು ಓದುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದರು.
ತನಿಖೆಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳನ್ನು ವಿವರಿಸಿ ಎರಡು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಪ್ರಕರಣದ ತನಿಖಾಧಿಕಾರಿಗಳಿಗೆ ಆದೇಶಿಸಿತು.
ಗಮನಾರ್ಹವಾಗಿ,ಕಳೆದ ವರ್ಷದ ಎ.14ರಂದು ಸಲ್ಲಿಸಿದ್ದ ಅಫಿಡವಿಟ್ನಲ್ಲಿ ದಿಲ್ಲಿ ಪೊಲೀಸರು,ಹಿಂದು ಯುವ ವಾಹಿನಿಯ ಕಾರ್ಯಕ್ರಮದಲ್ಲಿ ಮುಸ್ಲಿಮ್ ವಿರೋಧಿ ದ್ವೇಷ ಭಾಷಣವನ್ನು ಮಾಡಲಾಗಿರಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೂ ನ್ಯಾಯಾಲಯವು ‘ಉತ್ತಮ ಅಫಿಡವಿಟ್’ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ಆದೇಶಿಸಿತ್ತು.
2021,ಡಿ.17ರಿಂದ 19ರವರೆಗೆ ಹರಿದ್ವಾರದಲ್ಲಿ ‘ಧರ್ಮ ಸಂಸದ್’ ಕೂಡ ನಡೆದಿದ್ದು, ಅದರಲ್ಲಿ ಭಾಗಿಯಾಗಿದ್ದ ಹಲವಾರು ಹಿಂದುತ್ವ ಗುಂಪುಗಳ ಸದಸ್ಯರು ಮತ್ತು ಸಂತರು ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ನೀಡಿದ್ದರು.