ವಿಶ್ವಭಾರತಿ ವಿವಿಯು ನನ್ನನ್ನು ಹೊರಕ್ಕೆ ಹಾಕಲು ಏಕೆ ಪ್ರಯತ್ನಿಸುತ್ತಿದೆ ಎನ್ನುವುದು ತಿಳಿದಿಲ್ಲ: ಅಮರ್ತ್ಯ ಸೇನ್
ಕೋಲ್ಕತಾ,ಜ.26: ಶಾಂತಿನಿಕೇತನ ಕ್ಯಾಂಪಸ್ ನಲ್ಲಿರುವ ತನ್ನ ಆಸ್ತಿಯ ಭಾಗವನ್ನು ಮರಳಿಸುವಂತೆ ತನಗೆ ಸೂಚಿಸಿರುವುದರ ಹಿಂದಿನ ವಿಶ್ವಭಾರತಿ ವಿವಿಯ ಉದ್ದೇಶ ತನಗೆ ಅರ್ಥವಾಗಿಲ್ಲ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ (Amartya Sen) ಹೇಳಿದ್ದಾರೆ. ಆಸ್ತಿಯ ಈ ಭಾಗವು ಸೇನ್ ಅವರ ಅಕ್ರಮ ಸ್ವಾಧೀನದಲ್ಲಿದೆ ಎನ್ನುವುದು ವಿವಿಯ ಆರೋಪವಾಗಿದೆ.
ಮಂಗಳವಾರ ವಿಶ್ವಭಾರತಿ ವಿವಿಯು ಶಾಂತಿನಿಕೇತನದಲ್ಲಿಯ ಸುಮಾರು 7.6 ಕಟ್ಟಾ (ಪ.ಬಂಗಾಳದಲ್ಲಿ ಭೂವಿಸ್ತೀರ್ಣ ಅಳೆಯಲು ಬಳಕೆಯಾಗುತ್ತಿರುವ ಪದ) ಭೂಮಿಯನ್ನು ಹಿಂದಿರುಗಿಸುವಂತೆ ಸೂಚಿಸಿ ಸೇನ್ ಅವರಿಗೆ ನೋಟಿಸ್ ಹೊರಡಿಸಿತ್ತು. ಈ ಭೂಮಿಯು ಸೇನ್ ಕುಟುಂಬದ ಒಡೆತನದ ಎಸ್ಟೇಟ್ ನ ಭಾಗವಲ್ಲ ಎಂದು ಅದು ಪ್ರತಿಪಾದಿಸಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸೇನ್,‘ವಿವಿ ಅಧಿಕಾರಿಗಳ ಚಿಂತನೆಯಲ್ಲಿ ಯಾವುದೇ ವಿವೇಚನೆ ನನಗೆ ಕಂಡು ಬರುತ್ತಿಲ್ಲ. ವಿವಿಯ ಈ ಧೋರಣೆಯ ಹಿಂದಿನ ರಾಜಕೀಯ ನನಗೆ ಅರ್ಥವಾಗುತ್ತಿಲ್ಲ. ಇದು ನನ್ನ ನಿವಾಸವಾಗಿದ್ದು, 1940ರಲ್ಲಿ ವಿಶ್ವಭಾರತಿಯಿಂದ ಲೀಸ್ ಗೆ ಪಡೆದಿದ್ದ ಜಮೀನಿನಲ್ಲಿ ನಿರ್ಮಾಣಗೊಂಡಿದೆ ’ಎಂದು ಹೇಳಿದರು.
ಜಮೀನನ್ನು ನೂರು ವರ್ಷಗಳ ಅವಧಿಗೆ ತನ್ನ ಕುಟುಂಬಕ್ಕೆ ಲೀಸ್ಗೆ ನೀಡಲಾಗಿತ್ತು ಮತ್ತು ಈ ಪೈಕಿ ಕೆಲವು ಜಮೀನನ್ನು ತನ್ನ ತಂದೆ ಎಲ್ಲ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಿ ಮಾರುಕಟ್ಟೆಯಿಂದ ಖರೀದಿಸಿದ್ದರು ಎಂದು ಹೇಳಿದ ಸೇನ್,‘ಈ ವಿಷಯದಲ್ಲಿ ನನ್ನ ಸಮಯವನ್ನು ವ್ಯರ್ಥಗೊಳಿಸಲು ಯಾವುದೇ ಕಾರಣ ನನಗೆ ಕಂಡು ಬರುತ್ತಿಲ್ಲ. ವಿಶ್ವಭಾರತಿ ಏಕೆ ಇದ್ದಕ್ಕಿದ್ದಂತೆ ನನ್ನನ್ನು ಹೊರಕ್ಕೆ ತಳ್ಳುವ ಪ್ರಯತ್ನದಲ್ಲಿ ಸಕ್ರಿಯವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ತುಂಬ ಕಷ್ಟ’ ಎಂದರು.
2020,ಡಿಸೆಂಬರ್ ನಲ್ಲಿ ವಿಶ್ವಭಾರತಿಯು ತನ್ನ ಆವರಣದಲ್ಲಿ ಅಕ್ರಮ ನಿವೇಶನಗಳನ್ನು ಹೊಂದಿರುವವರ ಪಟ್ಟಿಯಲ್ಲಿ ಸೇನ್ ಅವರನ್ನು ಹೆಸರಿಸಿತ್ತು. ಸೇನ್ ಶಾಂತಿನಿಕೇತನದಲ್ಲಿ ತನ್ನ ಕುಟುಂಬದ ನಿವಾಸವನ್ನು ಹೊಂದಿದ್ದು,ಅದನ್ನು ಅವರ ಅಜ್ಜ ಹಾಗೂ ಸಂಸ್ಕೃತ ವಿದ್ವಾಂಸ ಕ್ಷಿತಿಮೋಹನ ಸೇನ್ ನಿರ್ಮಿಸಿದ್ದರು.
ಮೂಲ ಲೀಸ್ ಅನ್ನು 1.25 ಎಕರೆ ಜಮೀನಿಗೆ ನೀಡಲಾಗಿದ್ದು,ಸೇನ್ ನಿವಾಸವು 1.38 ಎಕರೆಯನ್ನು ವ್ಯಾಪಿಸಿದೆ ಎಂದು ಪ್ರತಿಪಾದಿಸಿ ವಿವಿಯು ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿದೆ. ಅಕ್ರಮ ಸ್ವಾಧೀನದಲ್ಲಿರುವ 0.13 ಎಕರೆ ಜಮೀನನ್ನು ಶೀಘ್ರ ಮರಳಿಸುವಂತೆ ಮಂಗಳವಾರ ಸೇನ್ ಅವರಿಗೆ ವಿವಿಯು ಜಾರಿಗೊಳಿಸಿರುವ ನೋಟಿಸ್ನಲ್ಲಿ ಸೂಚಿಸಲಾಗಿದೆ. ‘ನೀವು ಬಯಸಿದರೆ ವಿವಿಯು ನಿಮ್ಮ ಸರ್ವೆಯರ್/ವಕೀಲರ ಉಪಸ್ಥಿತಿಯಲ್ಲಿ ಜಂಟಿ ಸರ್ವೆಯನ್ನು ನಡೆಸಬಹುದು’ ಎಂದೂ ನೋಟಿಸ್ನಲ್ಲಿ ಹೇಳಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸೇನ್ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಹಲವಾರು ನೀತಿಗಳನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆಯ ಅನುಷ್ಠಾನವು ದೇಶದಲ್ಲಿ ಅಲ್ಪಸಂಖ್ಯಾತರ ಪಾತ್ರವನ್ನು ಕಡಿಮೆ ಮಾಡಬಹುದು ಮತ್ತು ಬಹುಸಂಖ್ಯಾತ ಶಕ್ತಿಗಳನ್ನು ಪ್ರೋತ್ಸಾಹಿಸಬಹುದು ಎಂದು ಅವರು ಕಳೆದ ವಾರ ಹೇಳಿದ್ದರು.
ಇದನ್ನು ಓದಿ: ಲಕ್ನೋ ಕಟ್ಟಡ ದುರಂತ: ಆರು ವರ್ಷದ ಬಾಲಕನ ಪ್ರಾಣ ಉಳಿಸಲು ನೆರವಾದ ʼಕಾರ್ಟೂನ್ ಶೋʼ!