ಉಡುಪಿ: ಮೀನುಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ
ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಬುಧವಾರ ಧರಣಿ ನಡೆಸಲಾಯಿತು.
ಮೀನು ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಬೇಕು. ನಿವೇಶನ, ವಸತಿ, ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳಿಗೆ ಮದುವೆ ಸಹಾಯ, 60ವರ್ಷದ ಬಳಿಕ ಪಿಂಚಣಿ ಯೋಜನೆ ಜಾರಿಯಾಗಬೇಕು. ಎಲ್ಲಾ ಮೀನುಗಾರರಿಗೆ ಬಿಪಿಎಲ್ ಕಾರ್ಡ್ ನೀಡಬೇಕು. ಜೀವನಾವಶ್ಯ ವಸ್ತುಗಳನ್ನು ಕಡಿಮೆ ದರದಲ್ಲಿ ನೀಡಬೇಕು. ಅಪಘಾತದಲ್ಲಿ ಮರಣ ಹೊಂದಿದ್ದಲ್ಲಿ 10ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.
ಕರಾವಳಿ ಉದ್ದಕ್ಕೂ ಕೇರಳ ಮಾದರಿಯಂತೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಿ ಮಳೆಗಾಲದಲ್ಲಿ ಆಗುವ ಅನಾಹುತಗಳನ್ನು ತಡೆಗಟ್ಟಬೇಕು. ನಿವೇಶನ ಇಲ್ಲದವರಿಗೆ ನಿವೇಶನ ಹಂಚಬೇಕು ಹಾಗೂ ವಸತಿಗೆ ಧನ ಸಹಾಯ ಒದಗಿಸಬೇಕು. ಸಿಆರ್ಝೆಡ್ ಹೆಸರಿನಲ್ಲಿ ಸಮುದ್ರ ತೀರದಲ್ಲಿ ವಾಸ ಮಾಡುವವರಿಗೆ ಆಗುವ ತೊಂದರೆಗಳನ್ನು ನಿವಾರಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಮೀನುಗಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಉಪಾಧ್ಯಕ್ಷರಾದ ವೆಂಕಟೇಶ್ ಕೋಣಿ, ಮೋಹನ್, ಎಂ.ಇಲಿಯಾಸ್, ಮುಖಂಡರಾದ ಅನ್ವರ್ ಹುಸೇನ್ ಕಟಪಾಡಿ, ಉಮಾರ್, ಸೋನುಕನಾಲ್, ಪ್ರಕಾಶ್ ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಜನವರಿ 2020 ರಿಂದ ಡಿಸೆಂಬರ್ 2022 ರ ತನಕ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 49 ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲೆಗೆ ಮಾನ್ಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಶಿಫಾರಸ್ಸಿನ ಮೇರೆಗೆ ಸುಮಾರು ರೂಪಾಯಿ 1,15,60,000(ಒಂದು ಕೋಟಿ ಹದಿನೈದು ಲಕ್ಷದ ಅರ್ವತ್ತು ಸಾವಿರ ರೂಪಾಯಿ)ಮೊತ್ತವನ್ನು ರೋಗಿಗಳ ಚಿಕಿತ್ಸೆಗೆ ಮಂಜೂರು ಮಾಡಲಾಗಿದೆ.