ಉಡುಪಿ: ಪಂಡಿತಾಚಾರ್ಯರ ಆರಾಧನಾ ಮಹೋತ್ಸವ
ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಲಿಕುಚಕುಲದವರಾದ ರಮೇಶ ಪೆಜತ್ತಾಯರ ಸಹಸ್ರ ಚಂದ್ರದರ್ಶನದ ಪ್ರಯುಕ್ತ ಪಂಡಿತಾಚಾರ್ಯ(ಶ್ರೀತ್ರಿವಿಕ್ರಮ ಪಂಡಿತಾಚಾರ್ಯ)ರ ಆರಾಧನಾ ಮಹೋತ್ಸವವನ್ನು ರವಿವಾರ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು.
ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಹಾಗೂ ಅದಮಾರು ಕಿರಿಯ ಮಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.
ಭಾವೀಸಮೀರ ವಿದ್ಯಾಪೀಠ, ಪೂರ್ಣಪ್ರಜ್ಞ ವಿದ್ಯಾಪೀಠ, ವ್ಯಾಸತೀರ್ಥ ವಿದ್ಯಾಪೀಠ, ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ಮತ್ತು ವಿಪ್ರರೊಂದಿಗೆ ವಿಷ್ಣುಸ್ತುತಿ, ವಾಯುಸ್ತುತಿ, ವಿಷ್ಣು ಸಹಸ್ರನಾಮ, ನರಸಿಂಹ ಸ್ತುತಿ, ಶಿವಸ್ತುತಿ ಇವುಗಳ ಸಾಮೂಹಿಕ ಪಾರಾಯಣ ನಡೆಯಿತು.
ನಂತರ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರ ಅಧ್ಯಕ್ಷತೆಯಲ್ಲಿ ’ತತ್ವಪ್ರದೀಪ’ ಗ್ರಂಥದ ವಿದ್ವತ್ ಗೋಷ್ಠಿಯು, ಡಾ.ಕಡಂದಲೆ ಗಣಪತಿ ಭಟ್, ಪ್ರೊ.ಸತ್ಯನಾರಾಯಣ ರಾವ್, ವಿದ್ವಾನ್ ಗುರುರಾಜ ಕಲ್ಕೂರ, ವಿದ್ವಾನ್ ಸುದರ್ಶನ ಸಾಮಗರಿಂದ ನಡೆಯಿತು.