ಪ್ರತಿವರ್ಷ ಸಂಕ್ರಾಂತಿ ವೇಳೆಯೇ ‘ಬೆಂಗಳೂರು ಹಬ್ಬ’: ಸಚಿವ ಆರ್.ಅಶೋಕ್
ಬೆಂಗಳೂರು, ಮಾ.25: ಮುಂದಿನ ದಿನಗಳಲ್ಲಿ ‘ಬೆಂಗಳೂರು ಹಬ್ಬ’ವನ್ನು ಜಗದ್ವಿಖ್ಯಾತ ಆಗಬೇಕು ಎನ್ನುವುದು ನನ್ನ ಆಶಯವಾಗಿದ್ದು, ಇನ್ನು ಮುಂದೆ ಪ್ರತಿವರ್ಷ ಸಂಕ್ರಾಂತಿಯ ಸಂದರ್ಭದಲ್ಲಿ ಹಬ್ಬ ನಡೆಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ನಮ್ಮ ಬೆಂಗಳೂರು ಹಬ್ಬ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿಗರೆಲ್ಲರೂ ಸೇರಿ ಬೆಂಗಳೂರು ಹಬ್ಬವನ್ನು ಪ್ರತಿ ವರ್ಷ ಅದ್ದೂರಿಯಾಗಿ ಆಚರಣೆ ಮಾಡಬೇಕು. ಮುಂದಿನ ವರ್ಷದಿಂದ ಸಂಕ್ರಾಂತಿಯ ಶನಿವಾರ-ರವಿವಾರ ಆಯೋಜಿಸಲಾಗುತ್ತದೆ. ಇನ್ನೂ ಎರಡು ವರ್ಷಗಳಲ್ಲಿ ದಸರಾ ಹಬ್ಬದಂತೆ ಬೆಂಗಳೂರು ಹಬ್ಬ ಆಚರಿಸಬೇಕು ಎಂದು ಹೇಳಿದರು.
ಬೆಂಗಳೂರಿಗೆ ತನ್ನದೇ ಆದ ವಿಶೇಷ ಇದೆ. ಕೆಂಪೇಗೌಡರು ಸುಮಾರು 64 ಪೇಟೆಗಳನ್ನು ಕಟ್ಟುವುದರ ಮೂಲಕ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದಾರೆ. ನಾವು ನಗರವನ್ನು ಇನ್ನಷ್ಟು ವಿಶ್ವ ವಿಖ್ಯಾತಿ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಇಡೀ ಪ್ರಪಂಚದಲ್ಲಿ ಬೆಂಗಳೂರು ಎಲ್ಲರಿಗೂ ಚಿರಪರಿಚಿತ ನಗರ. ದೇಶದ ಎಲ್ಲ ಭಾಗದ ಜನ ಬೆಂಗಳೂರಿನಲ್ಲಿ ವಾಸಮಾಡುತ್ತಿದ್ದಾರೆ. ಅವರೆಲ್ಲರಿಗೂ ಇಲ್ಲಿನ ಕಲೆ, ಆಹಾರ ಸಂಸ್ಕøತಿ, ಸಂಸ್ಕಾರ ಗೊತ್ತಾಗಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ಹಬ್ಬವನ್ನು 2010ರಲ್ಲಿಯೇ ಆಚರಿಸಲು ಪ್ರಯತ್ನ ಮಾಡಲಾಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲೇ ಇಲ್ಲ. ಈಗ ಮುಖ್ಯಮಂತ್ರಿ ಸಹಕಾರದಿಂದ ಇದು ಸಾಧ್ಯವಾಯಿತು ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ ಮಾತನಾಡಿ, ಬೆಂಗಳೂರಿನ ವಿಭಿನ್ನ, ವಿಶೇಷ ವಾತಾರಣದ ಜೊತೆಗೆ ಈ ತರಹದ ಹಬ್ಬವನ್ನು ನಾನು ಎಂದಿಗೂ ಬೆಂಗಳೂರಿನಲ್ಲಿ ನೋಡಿರಲಿಲ್ಲ. ಕೆಂಪೇಗೌಡರ ಆಶಯದಂತೆ ಬೆಂಗಳೂರು ಸಾಕಷ್ಟು ಬೆಳೆದಿದೆ. ಈ ಮಟ್ಟಕ್ಕೆ ನಗರವು ಬೆಳೆಯುತ್ತದೆ ಎಂದು ಅವರು ಕನಸು ಕಂಡಿರಲಿಕ್ಕಿಲ್ಲ, ಅಷ್ಟು ಎತ್ತರಕ್ಕೆ ನಗರದ ಕೀರ್ತಿ ಜಗತ್ತಿನೆಲ್ಲಡೆ ಹರಡಿದೆ ಎಂದರು.
ನಮ್ಮ ಬೆಂಗಳೂರು ಹಬ್ಬದ ಪ್ರಯುಕ್ತ ಬಾಲಭವನ ಆವರಣದ ಆಂಪಿಕ್ ಥಿಯೇಟರ್ನಲ್ಲಿ ವಿವಿಧ ಅಕಾಡೆಮಿಗಳು, ರಂಗಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ನಾಟಕ, ಬೀದಿ ನಾಟಕಗಳು, ಗೊಂಬೆ ಪ್ರದರ್ಶನ ನಡೆಯಿತು. ಇದರೊಂದಿಗೆ ಯಕ್ಷಗಾನ, ಗಾಯನ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.