‘ರೇರಾ’ ನಿಯಮ ಉಲ್ಲಂಘಿಸಿದವರ ದಂಡ ವಸೂಲಾತಿಗೆ ಕ್ರಮ: ಝಮೀರ್ ಅಹ್ಮದ್

ಝಮೀರ್ ಅಹ್ಮದ್
ಬೆಂಗಳೂರು : ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ದಂಡ ವಸೂಲಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ಝಮೀರ್ ಅಹ್ಮದ್ ತಿಳಿಸಿದರು.
ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆ-ರೇರಾ ಪ್ರಾಧಿಕಾರದಲ್ಲಿ ಹಿಂದಿನ ವರ್ಷದಲ್ಲಿ ಅನುಮೋದನೆಗಾಗಿ 3129 ಪ್ರಸ್ತಾವನೆಗಳು ಸ್ವೀಕರಿಸಲಾಗಿದ್ದು, 2701 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. 243 ಪ್ರಸ್ತಾವನೆಗಳು ಬಾಕಿ ಉಳಿದ್ದಿದ್ದು, 633 ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ ಮತ್ತು 19 ಪ್ರಸ್ತಾವನೆಗಳನ್ನು ವಿಲೇ ಇಡಲಾಗಿದೆ ಎಂದರು.
ಪ್ರಾಧಿಕಾರವು ಕೆ-ರೇರಾ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಇಲ್ಲಿಯವರೆಗೆ ಒಟ್ಟು 11,495 ದೂರು ದಾಖಲಿಸಿಕೊಂಡಿದೆ. ಪ್ರಾಜೆಕ್ಟ್ಗಳಿಗೆ ಸಂಬಂಧಿಸಿದಂತೆ 11,126 ದಾಖಲಿಸಿಕೊಂಡಿದೆ ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳನ್ನು ಉಲ್ಲಂಘನೆ ಮಾಡಿದ 1,660 ಪ್ರಕರಣಗಳಲ್ಲಿ 2024ರ ಡಿಸೆಂಬರ್ ಅಂತ್ಯಕ್ಕೆ ಸುಮಾರು 758 ಕೋಟಿ ರೂ.ಗಳ ಮೊತ್ತವನ್ನು ದಂಡ ವಿಧಿಸಲಾಗಿದೆ. ದಂಡ ವಸೂಲಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಝಮೀರ್ ಅಹ್ಮದ್ ತಿಳಿಸಿದರು.