ನಟ ದರ್ಶನ್ ಬಳಿಯಿರುವ ಪಿಸ್ತೂಲು ಪರವಾನಗಿ ತಾತ್ಕಾಲಿಕ ಅಮಾನತು

ನಟ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರ ಬಳಿಯಿರುವ ಪಿಸ್ತೂಲು ಪರವಾನಗಿ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಬೆಂಗಳೂರು ಪೊಲೀಸ್ ಆಡಳಿತ ವಿಭಾಗ ಆದೇಶಿಸಿದೆ.
ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನೀವು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಹಾಗಾಗಿ, ಹತ್ಯೆ ಪ್ರಕರಣ ಮುಗಿಯುವವರೆಗೂ ಲೈಸೆನ್ಸ್ ಅಮಾನತು ಮಾಡಲಾಗಿದ್ದು, ಗನ್ ವಶಕ್ಕೆ ಪಡೆದುಕೊಳ್ಳುವಂತೆ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ಸೂಚಿಸಲಾಗಿದೆ.
ಪಿಸ್ತೂಲು ಪರವಾನಗಿ ರದ್ದು ಮಾಡದಿರಲು ಕಾರಣ ನೀಡಿ ಎಂದು ದರ್ಶನ್ ಅವರಿಗೆ ಈ ಹಿಂದೆ ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹೂ ನೋಟಿಸ್ ನೀಡಿದ್ದರು. ನೋಟಿಸ್ಗೆ ಉತ್ತರಿಸಿದ್ದ ದರ್ಶನ್, ತಾವು ಓರ್ವ ಸೆಲೆಬ್ರಿಟಿ, ತಾವು ಹೋಗುವ ಕಡೆಗಳಲ್ಲಿ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಪಿಸ್ತೂಲು ಅವಶ್ಯಕತೆಯಿದೆ ಎಂದಿದ್ದರು.
ದರ್ಶನ್ ನೀಡಿದ್ದ ಕಾರಣ ಪರಿಗಣಿಸದ ಬೆಂಗಳೂರು ಪೊಲೀಸ್ ಆಡಳಿತ ವಿಭಾಗ, ಮುನ್ನೆಚ್ಚರಿಕಾ ಕ್ರಮವಾಗಿ ದರ್ಶನ್ ಅವರ ಗನ್ ಪರವಾನಗಿ ತಾತ್ಕಾಲಿಕ ಅಮಾನತು ಮಾಡಿದೆ.