ಬಿಎಂಟಿಸಿ ಢಿಕ್ಕಿ, ಮಹಿಳೆ ಮೃತ್ಯು

ಬೆಂಗಳೂರು : ಬಿಎಂಟಿಸಿ ಬಸ್ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ನಾಯಂಡಹಳ್ಳಿ ಬಳಿಯ ಪಂತರಪಾಳ್ಯದಲ್ಲಿ ನಡೆದಿದ್ದು, ಕಾಮಾಕ್ಷಿಪಾಳ್ಯದ ನಿವಾಸಿ ಸರೋಜ (42) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ 9.45ರ ಸುಮಾರಿಗೆ ಜ್ಞಾನಭಾರತಿಯಲ್ಲಿ ಸಂಬಂಧಿಕರೊಬ್ಬರ ಮದುವೆ ಮುಗಿಸಿಕೊಂಡು ಸರೋಜ ಹಾಗೂ ಅವರ ಸಹೋದರ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಪಂತರಪಾಳ್ಯ ರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿದ್ದ ಚಾಲಕ ಅಜಾಗರೂಕತೆಯಿಂದ ಏಕಾಏಕಿ ಬಾಗಿಲು ತೆರೆದಿದ್ದಾನೆ. ಇದರಿಂದ, ಕಾರಿನ ಬಾಗಿಲಿಗೆ ಸ್ಕೂಟರ್ ಢಿಕ್ಕಿಯಾಗಿ ಸರೋಜ ಹಾಗೂ ಅವರ ಸಹೋದರ ರಸ್ತೆ ಮೇಲೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ರಸ್ತೆಯ ಬಲಭಾಗದಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್ನ ಹಿಂಬದಿ ಚಕ್ರಗಳು ಸರೋಜ ಅವರ ತಲೆ ಮೇಲೆ ಹರಿದಿದೆ ಎನ್ನಲಾಗಿದೆ.
ಇದರ ಪರಿಣಾಮ ಸರೋಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಹಾಗೂ ಬಸ್ ಚಾಲಕನ ನಿರ್ಲಕ್ಷ್ಯತನದ ವಿರುದ್ಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.