ಸರ್ವಾಧಿಕಾರಿ ಮನಸ್ಥಿತಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಹ್ರೋಜ್ ಖಾನ್ ಖಾನ್
ಬೆಂಗಳೂರು: ಸಂಸತ್ ಭದ್ರತಾ ವೈಫಲ್ಯ ವಿಚಾರವಾಗಿ ಧ್ವನಿ ಎತ್ತಿದ ಸಂಸತ್ ಸದಸ್ಯರನ್ನು ಅಮಾನತು ಮಾಡಿರುವುದು ಖಂಡನೀಯ. ಸರ್ವಾಧಿಕಾರಿ ಮನಸ್ಥಿತಿಗಳು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಹ್ರೋಜ್ ಖಾನ್ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವೇ ವಿರೋಧ ಪಕ್ಷಗಳ ಧ್ವನಿ. ಈ ಧ್ವನಿಯನ್ನು ಹತ್ತಿಕ್ಕುವ ಮೂಲಕ ಕೇಂದ್ರ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಮಾಧಿ ಕಟ್ಟಲು ಮುಂದಾಗಿದೆ. ಸಂಸತ್ ಭದ್ರತಾ ವೈಫಲ್ಯ ದೇಶದ ಅತಿದೊಡ್ಡ ಭದ್ರತಾ ವೈಫಲ್ಯ ಎಂದೇ ಪರಿಗಣಿಸಲಾಗುತ್ತದೆ. ಈ ವಿಚಾರವಾಗಿ ಸಂಸತ್ ಅಧಿವೇಶನದಲ್ಲಿ ಪ್ರಧಾನಿ, ಗೃಹ ಸಚಿವರು ಹಾಗೂ ಸಂಸತ್ತಿನ ಜವಾಬ್ದಾರಿ ಹೊತ್ತಿರುವ ಸ್ಪೀಕರ್ ಹೊಣೆ ಹೊರಬೇಕು ಎಂದು ಆಗ್ರಹಿಸಿದ್ದಾರೆ. ಸಂಸತ್ ಭದ್ರತಾ ವೈಫಲ್ಯಕ್ಕೆ ಮೂಲ ಕಾರಣರಾದ ಸಂಸದ ಪ್ರತಾಪ್ ಸಿಂಹ ಅವರನ್ನು ತನಿಖೆ ಮಾಡದೆ ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡುತ್ತಿರುವುದು ದೊಡ್ಡ ದುರಂತ. ವಿರೋಧ ಪಕ್ಷಗಳ ಧ್ವನಿಗೆ ಅವಕಾಶವೇ ಇಲ್ಲದ ಸಂಸತ್ತಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯವೇ ಎಂದು ಮೆಹರೋಝ್ ಖಾನ್ ಪ್ರಶ್ನಿಸಿದ್ದಾರೆ.