ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ
ಬೆಂಗಳೂರು, ಅ.6: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮ ನಿಯಮಿತ(ಡಿಡಿಯುಟಿಟಿಎಲ್)ದ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಮಾಗಡಿ ಉಪ ವಿಭಾಗದ ಪಂಚಾಯತ್ ರಾಜ್ ಇಲಾಖೆ ಎಇಇ ಚರಣ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚರಣ್ಕುಮಾರ್ ಅವರನ್ನು ನಿಯೋಜನೆಯ ಮೇರೆಗೆ ಡಿಡಿಯುಟಿಟಿಎಲ್ಗೆ ವರ್ಗಾವಣೆ ಮಾಡಲಾಗಿತ್ತು. ನಿಗಮದಲ್ಲಿ ಕಾಮಗಾರಿಗಳು ನಡೆಯದಿದ್ದರೂ ಸಹ ಸುಮಾರು 300ಕ್ಕೂ ಕಾಮಗಾರಿಗಳು ಪೂರ್ಣಗೊಂಡಿರುವುದಾಗಿ ದೃಢೀಕರಿಸಿದ್ದ ಆರೋಪದಡಿ ಚರಣ್ ಕುಮಾರ್ ಅವರನ್ನು ಬಂಧಿಸಲಾಗಿದ್ದು, ಸದ್ಯ ಆರೋಪಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ ಒತ್ತಡದಿಂದ ತಾವು ದೃಢೀಕರಣ ನೀಡಿದ್ದಾಗಿ ಚರಣ್ ಕುಮಾರ್ ಹೇಳಿಕೆ ನೀಡಿರುವುದಾಗಿ ಎಂದು ಸಿಐಡಿ ಮೂಲಗಳು ತಿಳಿಸಿವೆ.
Next Story