ಬೆಂಗಳೂರು ಸೇರಿ ಎಲ್ಲೆಡೆ ಗುಡ್ ಫ್ರೈಡೇ ಆಚರಣೆ

ಬೆಂಗಳೂರು : ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು(ಗುಡ್ ಫ್ರೈಡೆ) ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ಶುಕ್ರವಾರ ಇಲ್ಲಿನ ಶಿವಾಜಿನಗರದ ಸಂತ ಮೇರಿ ಬೆಸಿಲಿಕಾ, ಎಂ.ಜಿ ರಸ್ತೆಯಲ್ಲಿರುವ ಈ ಸೇಂಟ್ ಮ್ಯಾಕ್ರ್ಸ್ ಕ್ಯಾಥೆಡ್ರಲ್ ಚರ್ಚ್, ಆಲ್ ಪೀಪಲ್ಸ್ ಚರ್ಚ್, ಸೇಂಟ್ ಥಾಮಸ್ ಚರ್ಚ್, ಇನ್ಫೆಂಟ್ ಜೀಸಸ್ ಚರ್ಚ್, ಸೇಂಟ್ ಲ್ಯೂಕ್ಸ್ ಚರ್ಚ್, ಸೇಂಟ್ ಪ್ಯಾಟ್ರಿಕ್ ಚರ್ಚ್ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ಬೆಳಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು.
ಮತ್ತೊಂದೆಡೆ, ಕೆಲವು ಚರ್ಚ್ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತರಲಾಯಿತು. ತ್ಯಾಗದ ಉಳಿಕೆಯ ಹಣವನ್ನು ಬಡವರಿಗೆ ಹಂಚಲಾಯಿತು.
ಆಯಾ ಚರ್ಚ್ಗಳ ಧರ್ಮಾಧ್ಯಕ್ಷರು ಗುಡ್ ಫ್ರೈಡೆ ಸಂದೇಶ ನೀಡಿ, ನ್ಯಾಯದಿಂದ ವಂಚಿತರಾದ ಮುಗ್ಧರ, ಆಸ್ಪತ್ರೆಗಳಲ್ಲಿ ನರಳುತ್ತಿರುವವರ, ಶೋಷಣೆಗೊಳಗಾದ ಜನರ ದುಃಖ ಸಂಕಟಗಳಲ್ಲಿ ಯೇಸುಕ್ರಿಸ್ತರು ನಿತ್ಯ ಶಿಲುಬೆಗೇರುತ್ತಿದ್ದಾರೆ. ಅವರು ಮುಗ್ಧರ ನೋವುಗಳ ಪ್ರತಿರೂಪ ಎಂದರು.
ಜಗತ್ತಿನಾದ್ಯಂತ ಇರುವ ಕೆಟ್ಟತನಕ್ಕೆ ಯೇಸುವಿನ ಪ್ರೀತಿ, ಕರುಣೆ, ಕ್ಷಮೆ, ಔದಾರ್ಯಗಳು ಔಷಧವಾಗಬೇಕು. ಹೊಣೆಗೇಡಿತನ, ಕ್ರೋಧ, ತಿಳಿಗೇಡಿತನಕ್ಕೆ ಯೇಸು ಉತ್ತರವಾಗಿದ್ದಾರೆ. ಯೇಸುಕ್ರಿಸ್ತ ಶಿಲುಬೆಯನ್ನು ಹೊತ್ತು ನಡೆದಂತೆ ನಾವೂ ಜೀವನದಲ್ಲಿ ಎದುರಾಗುವ ಕಷ್ಟ, ಸಾವು, ನೋವು, ಸಂಕಟಗಳನ್ನು ಎದುರಿಸಿ ಮುನ್ನಡೆಬೇಕಿದೆ. ಸ್ವಾರ್ಥ ತ್ಯಜಿಸಿ ಪರರ ಪ್ರೀತಿಯಲ್ಲಿ ಬದುಕಲು ದೇವರು ತೋರಿರುವ ದಾರಿಯೇ ಶಿಲುಬೆಯ ಹಾದಿ ಎಂದು ಧರ್ಮಾಧ್ಯಕ್ಷರು ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದರು.