ಜಾತಿಜನಗಣತಿ ವರದಿ ಓದಲು ಪ್ರಾರಂಭಿಸಿದ್ದೇನೆ : ಗೃಹ ಸಚಿವ ಜಿ.ಪರಮೇಶ್ವರ್
ಜಿ.ಪರಮೇಶ್ವರ್
ಬೆಂಗಳೂರು : ನಾನು ಜಾತಿ ಜನಗಣತಿ ವರದಿಯನ್ನು ಓದಲು ಪ್ರಾರಂಭಿಸಿದ್ದೇನೆ. ಮೂರರಿಂದ ನಾಲ್ಕು ಪುಟಗಳನ್ನು ಮಾತ್ರ ಓದಿದ್ದೇನೆ. ಒಟ್ಟಾರೆ ಇದರಲ್ಲಿ ಎರಡು ಮೂರು ವಿಚಾರಗಳಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಪೂರ್ಣಗೊಂಡು ಮೂರು ವರ್ಷ ಕಳೆದಿವೆ. ವರದಿಯನ್ನು ಹೊರತರುವುದು ಕಠಿಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲಿನ ನಡುವೆಯೂ ಈ ವರದಿಯನ್ನು ಹೊರತಂದಿದ್ದಾರೆ ಎಂದರು.
ವರದಿಯಿಂದ ಉಂಟಾಗುವ ಪರಿಣಾಮ, ನೀತಿಗಳು ಮತ್ತು ಕಾರ್ಯಕ್ರಮಗಳ ವಿವರಗಳ ಕುರಿತು ನಾನು ಮಾತನಾಡುವುದಿಲ್ಲ. ಇವುಗಳ ಬಗ್ಗೆ ಈ ಹಂತದಲ್ಲಿ ಮಾತನಾಡಲು ಸಾಧ್ಯವಿಲ್ಲ. ಈ ಹಂತದಲ್ಲಿ ನಾನು ಅದರ ಬಗ್ಗೆ ಏನಾದರೂ ಹೇಳಿದರೆ ಅದು ಸೂಕ್ತವಲ್ಲ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಜಾತಿಗಣತಿ ಪ್ರತಿಗಳನ್ನು ಓದಿ ನಂತರದಲ್ಲಿ ಎಪ್ರಿಲ್ 17ರಂದು ಈ ವಿಷಯದ ಬಗ್ಗೆ ಮಾತ್ರ ಚರ್ಚಿಸಲು ಸಚಿವರಿಗೆ ಸೂಚಿಸಲಾಗಿದೆ. ಚರ್ಚೆಯ ನಂತರ, ಸ್ವೀಕಾರದ ವಿಷಯ ಮತ್ತು ಇತರ ಸಮಸ್ಯೆಗಳು ಉದ್ಭವಿಸುತ್ತವೆ. ಇದು ಕೇವಲ ಆರಂಭ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ವರದಿ ಬಗ್ಗೆ ಈ ಹಂತದಲ್ಲಿ ಏನನ್ನೂ ಹೇಳಲು ಆಗುವುದಿಲ್ಲ. ಟೀಕೆಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಮುದಾಯಗಳು ಮತ್ತು ನಾಯಕರಿಂದ ಅಭಿಪ್ರಾಯಗಳು ಬರುತ್ತಿವೆ. ಈ ವಿಷಯವನ್ನು ಸಂಪುಟದಲ್ಲಿ ಚರ್ಚಿಸಿ ಫಲಿತಾಂಶ ಏನಾಗುತ್ತದೆ ಎಂದು ನೋಡೋಣ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.