ಹೊಸ ದತ್ತಾಂಶವನ್ನು ಆಧರಿಸಿ ಒಳಮೀಸಲಾತಿ ಕಲ್ಪಿಸಲು ದಸಂಸ ಮನವಿ

ಬೆಂಗಳೂರು : ‘2011ರ ಜನಗಣತಿಯು ಹಳೆಯದಾಗಿದ್ದು, ಆ ಗಣತಿಯಲ್ಲಿ ‘ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ’ ಜಾತಿಗಳ ಗಣತಿ ಮಾಡಲಾಗಿದೆ. ಇವುಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಟ್ಟು, ಹೊಸ ದತ್ತಾಂಶವನ್ನು ಆಧರಿಸಿ ಪರಿಶಿಷ್ಟ ಜಾತಿ(ಎಸ್ಸಿ) ಒಳಮೀಸಲಾತಿ ಕಲ್ಪಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮನವಿ ಮಾಡಿದೆ.
ಶುಕ್ರವಾರ ಸಮಿತಿ ಸಂಚಾಲಕ ಮರಿಯಪ್ಪ ಹಳ್ಳಿ ನೇತೃತ್ವದ ನಿಯೋಗ, ಒಳ ಮೀಸಲಾತಿ ಸಂಬಂಧದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಏಕಸದಸ್ಯ ಆಯೋಗಕ್ಕೆ ಲಿಖಿತ ಮನವಿ ಸಲ್ಲಿಸಿದೆ. ‘2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಗಳ ಜನಸಂಖ್ಯೆ 1.04 ಕೋಟಿಗೂ ಅಧಿಕವಿದ್ದು, ರಾಜ್ಯ ಸರಕಾರದ 2023ರ ಅಧಿಕೃತ ಅಂದಾಜಿನ ಪ್ರಕಾರ ಜನಸಂಖ್ಯೆಯು ಸುಮಾರು 1.41 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ವೈಜ್ಞಾನಿಕವಾಗಿ ಹೊಸಗಣತಿಯನ್ನು ಮಾಡಿ ಸರ್ವರಿಗೂ ಸಮಪಾಲನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಬಹುದು’ ಎಂದು ಹೇಳಿದೆ.
‘ಪರ್ಯಾಯವಾಗಿ 2025ರಲ್ಲಿ ಕೇಂದ್ರ ಸರಕಾರ ನಡೆಸಲಿರುವ ಜನಗಣತಿಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಗಳನ್ನು ಕೈಬಿಟ್ಟು ಕಲೆ ಹಾಕುವ ದತ್ತಾಂಶದ ಪ್ರಕಾರ ಒಳ ಮೀಸಲಾತಿ ಜಾರಿಗೊಳಿಸುವುದು ಸೂಕ್ತ. ಆಯಾ ಉಪಜಾತಿಗಳ ಹೆಸರುಗಳನ್ನು ಬಳಸಿ ಜಾತಿ ಗಣತಿ ನಡೆಸುವುದು ಅನಿವಾರ್ಯ. ಹೊಸ ಜಾತಿ ಗಣತಿಯನ್ನು ಮಾಡುವ ಮೂಲಕ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯ.
ಆದುದರಿಂದ ಸರಕಾರದ ಬಳಿಯಲ್ಲಿ ಯಾವುದೇ ರೀತಿಯ ನಿಖರವಾದ ಉಪಜಾತಿಗಳ ದತ್ತಾಂಶವಿಲ್ಲದ ಕಾರಣ ಹಾಗೂ ಸುಪ್ರಿಂ ಕೋರ್ಟ್ ಹೇಳಿರುವ ಮಾರ್ಗಸೂಚಿಗಳ ಅನ್ವಯ ಮುಂದಿನ ಗಣತಿ ನಡೆಯಬೇಕು. ಆ ಬಳಿಕ ಹೊಸ ದತ್ತಾಂಶವನ್ನು ಆಧರಿಸಿ ಮೀಸಲಾತಿ ವರ್ಗೀಕರಣ ಮಾಡಬೇಕು ಎಂದು ಕೋರಿದೆ. ಮರಿಯಪ್ಪ ಹಳ್ಳಿ ನೇತೃತ್ವದ ನಿಯೋಗದಲ್ಲಿ ಪದಾಧಿಕಾರಿಗಳಾದ ಬಿ.ಗಂಗನಂಜಯ್ಯ, ಡಾ.ಶಿವಲಿಂಗಯ್ಯ, ಕೃಷ್ಣಮೂರ್ತಿ ಎಂ.ಎಸ್., ಸರವಣ, ಶ್ರೀನಿವಾಸ್, ರಾಮಣ್ಣ, ಜಯಂತಿ ಸಹಿತ ಇನ್ನಿತರರು ಉಪಸ್ಥಿತರಿದ್ದರು.