ಇನ್ವೆಸ್ಟ್ ಕರ್ನಾಟಕ-2025 | 10.27 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆ, 6 ಲಕ್ಷ ಉದ್ಯೋಗ ಸೃಷ್ಟಿ : ಎಂ.ಬಿ.ಪಾಟೀಲ್

ಬೆಂಗಳೂರು : ಪ್ರಸಕ್ತ ಸಾಲಿನ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮೂಡಲು ಘೋಷಿಸಲಾಗಿದ್ದು, 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಶುಕ್ರವಾರ ಬೆಂಗಳೂರು ಅರಮನೆಯಲ್ಲಿ ‘ಇನ್ವೆಸ್ಟ್ ಕರ್ನಾಟಕ-2025’ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
10,27,378 ಕೋಟಿ ರೂ. ಪೈಕಿ 4,03,533 ಕೋಟಿ ರೂ. ಹೂಡಿಕೆಯನ್ನು ಘೋಷಿಸಲಾಗಿದ್ದು, 6,23,845 ಕೋಟಿ ರೂ.ಗಳ ಹೂಡಿಕೆ ಸಂಬಂಧ ಒಡಂಬಡಿಕೆಗೆ ಸಹಿ ಹಾಕಲಾಗಿದೆ. 10.27 ಲಕ್ಷ ಕೋಟಿ ರೂ.ಗಳಲ್ಲಿ ಶೇ.75ರಷ್ಟು ಹೂಡಿಕೆಯೂ ಬೆಂಗಳೂರು ನಗರ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಆಗಲಿದೆ. ಇದರಲ್ಲಿ ಶೇ.45ಕ್ಕಿಂತ ಹೆಚ್ಚಿನ ಹೂಡಿಕೆಯೂ ಉತ್ತರ ಕರ್ನಾಟಕ ಭಾಗದಲ್ಲಿ ಆಗಲಿದೆ ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ನವೀಕರಿಸಬಹುದಾದ ಇಂಧನ ವಲಯದಲ್ಲಿ ಶೇ.41, ಉತ್ಪಾದನಾ ವಲಯದಲ್ಲಿ ಶೇ.15, ಸನ್ರೈಸ್ ವಲಯದಲ್ಲಿ ಶೇ.14, ಮೂಲಸೌಕರ್ಯ, ಕೈಗಾರಿಕೆ, ಲಾಜಿಸ್ಟಿಕ್ಸ್ ಪಾರ್ಕ್ಗಳಲ್ಲಿ ಶೇ.11, ಸಾಮಾನ್ಯ ಉತ್ಪಾದನಾ ವಲಯದಲ್ಲಿ ಶೇ.10 ಹಾಗೂ ನವೋದ್ಯಮ ಕ್ಯಾಪಿಟಲ್ನಲ್ಲಿ ಶೇ.9ರಷ್ಟು ಬಂಡವಾಳ ಹೂಡಿಕೆಯಾಗಿದೆ ಎಂದು ಅವರು ತಿಳಿಸಿದರು.
ಉತ್ಪಾದನಾ-ಸನ್ ರೈಸ್ ವಲಯ(ಎ ಅಂಡ್ ಡಿ, ಆಟೋ, ಇವಿ, ಇಎಸ್ಡಿಎಂ, ಆರ್ ಅಂಡ್ ಡಿ, ಜಿಸಿಸಿ)ದಲ್ಲಿ 75,274 ಕೋಟಿ ರೂ. ಘೋಷಣೆ, 63,719 ಕೋಟಿ ರೂ.ಗಳ ಒಡಂಬಡಿಕೆಗೆ ಸಹಿ ಸೇರಿದಂತೆ ಒಟ್ಟು 1,38,993 ಕೋಟಿ ರೂ. ಹೂಡಿಕೆಯಾಗಲಿದೆ. ಸಾಮಾನ್ಯ ಉತ್ಪಾದನಾ ವಲಯ(ಆಹಾರ ಮತ್ತು ಅಗ್ರಿ, ಜವಳಿ, ಫಾರ್ಮ, ಮಶೀನ್ ಟೂಲ್ಸ್, ಎಫ್ಎಂಸಿಜಿ)ದಲ್ಲಿ 52,400 ಕೋಟಿ ರೂ. ಘೋಷಣೆ, 52,619 ಕೋಟಿ ರೂ.ಗಳ ಒಡಂಬಡಿಕೆಗೆ ಸಹಿ ಸೇರಿದಂತೆ 1,05,019 ಕೋಟಿ ರೂ.ಹೂಡಿಕೆಯಾಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಉಕ್ಕು, ಸಿಮೆಂಟ್ ಸೇರಿದಂತೆ ಇನ್ನಿತರ ಉತ್ಪಾದನಾ ವಲಯದಲ್ಲಿ 16,143 ಕೋಟಿ ರೂ.ಘೋಷಣೆ, 1,43,700 ಕೋಟಿ ರೂ.ಗಳ ಒಡಂಬಡಿಕೆಗೆ ಸಹಿ ಸೇರಿದಂತೆ 1,59,843 ಕೋಟಿ ರೂ. ಹೂಡಿಕೆಯಾಗಲಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ 81,356 ಕೋಟಿ ರೂ.ಘೋಷಣೆ, 3,44,425 ಕೋಟಿ ರೂ.ಗಳ ಒಡಂಬಡಿಕೆಗೆ ಸಹಿ ಸೇರಿದಂತೆ ಒಟ್ಟು 4,25,781 ಕೋಟಿ ರೂ.ಹೂಡಿಕೆಯಾಗಲಿದೆ ಎಂದು ಅವರು ವಿವರಿಸಿದರು.
ಮೂಲಸೌಕರ್ಯ, ಕೈಗಾರಿಕೆ ಹಾಗೂ ಲಾಜಿಸ್ಟಿಕ್ಸ್(ನಗರ ಅನಿಲ ಸರಬರಾಜು, ಟೆಲಿಕಾಂ, ವಿಮಾನ ನಿಲ್ದಾನ, ಕೌಶಲ್ಯ, ಡಾಟಾ ಕೇಂದ್ರಗಳು)ನಲ್ಲಿ 88,492 ಕೋಟಿ ರೂ.ಘೋಷಣೆ, 19,382 ಕೋಟಿ ರೂ.ಗಳ ಒಡಂಬಡಿಕೆಗೆ ಸಹಿ ಸೇರಿದಂತೆ ಒಟ್ಟು 1,07,874 ಕೋಟಿ ರೂ.ಹೂಡಿಕೆಯಾಗಲಿದೆ. ಅದೇ ರೀತಿ ನವೋದ್ಯಮ ಕ್ಯಾಪಿಟಲ್ನಲ್ಲಿ 89,868 ಕೋಟಿ ರೂ.ಹೂಡಿಕೆಗೆ ಘೋಷಣೆಯಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಜೆಎಸ್ಡಬ್ಲ್ಯು ಸಮೂಹವು 1.20 ಲಕ್ಷ ಕೋಟಿ ರೂ., ಬಲ್ದೋಟಾ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ 54 ಸಾವಿರ ಕೋಟಿ ರೂ., ಲಾಮ್ ರಿಸರ್ಚ್ 10 ಸಾವಿರ ಕೋಟಿ ರೂ., ವೋಲ್ವೊ 1400 ಕೋಟಿ ರೂ., ಸಂವರ್ಧನ ಮದರ್ಸನ್ 3700 ಕೋಟಿ ರೂ., ಸಫ್ರಾನ್ 225 ಕೋಟಿ ರೂ., ಹೋಂಡಾ 600 ಕೋಟಿ ರೂ., ಎಂ.ವಿ.ಎನರ್ಜಿ ಪ್ರೈವೆಟ್ ಲಿಮಿಟೆಡ್ 15 ಸಾವಿರ ಕೋಟಿ ರೂ., ರೋಸ್ಲೆಕ್ 5 ಸಾವಿರ ಕೋಟಿ ರೂ., ಇಂಟರ್ನ್ಯಾಷನಲ್ ಬ್ಯಾಟರಿ ಕಂಪನಿ 390 ಕೋಟಿ ರೂ.ಗಳು ಹೂಡಿಕೆ ಮಾಡುವುದಾಗಿ ಘೋಷಿಸಿದೆ ಎಂದು ಅವರು ಹೇಳಿದರು.
ಕ್ರೋನ್ಸ್ 351 ಕೋಟಿ ರೂ., ನಿಡೆಕ್ 600 ಕೋಟಿ ರೂ., ಟಿಎಎಸ್ಎಲ್ 1,530 ಕೋಟಿ ರೂ., ವಿಂಗ್ಸ್ ವಿಟ್ಟೇರಾ 350 ಕೋಟಿ ರೂ., ಬಾಲಾಜಿ ವಾಫೆರ್ಸ್ 550 ಕೋಟಿ ರೂ., ಮಹೀಂದ್ರಾ ಸಸ್ಟೇನ್ ಪ್ರೈ.ಲಿ. 36 ಸಾವಿರ ಕೋಟಿ ರೂ., ಹಿರೋ ಫ್ಯೂಚರ್ ಎನರ್ಜಿಸ್ 22,200 ಕೋಟಿ ರೂ., ಎಪ್ಸಿಲಾನ್ ಗ್ರೂಪ್ 15,350 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ ಎಂದು ಎಂ.ಬಿ.ಪಾಟೀಲ್ ನುಡಿದರು.
ಶ್ರೀ ಸಿಮೆಂಟ್ ಲಿಮಿಟೆಡ್ 8,350 ಕೋಟಿ ರೂ., ಸ್ನಿಡರ್ ಎಲೆಕ್ಟ್ರಿಕ್ 2,247 ಕೋಟಿ ರೂ., ಹಿಟಾಚಿ ಎನರ್ಜಿ 1 ಸಾವಿರ ಕೋಟಿ ರೂ., ಹಾವೆಲ್ಸ್ 710 ಕೋಟಿ ರೂ., ಸುಜ್ಲಾನ್ ಎನರ್ಜಿ ಲಿ. 21,950 ಕೋಟಿ ರೂ., ಇಎಸ್ಆರ್ ಅಡ್ವೈಸರ್ಸ್ 2,500 ಕೋಟಿ ರೂ. ಹಾಗೂ ಟಿವಿಎಸ್ ಮೋಟರ್ ಕಂಪನಿ 2 ಸಾವಿರ ಕೋಟಿ ರೂ.ಹೂಡಿಕೆ ಮಾಡುವುದಾಗಿ ಘೋಷಿಸಿದೆ ಎಂದು ಅವರು ತಿಳಿಸಿದರು.
2025-30ರವರೆಗಿನ ನೂತನ ಕೈಗಾರಿಕಾ ನೀತಿಯಡಿ ಒಟ್ಟಾರೆಯಾಗಿ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಇಟ್ಟುಕೊಳ್ಳಲಾಗಿದೆ. ಹೊಸ ನೀತಿಯಡಿಯಲ್ಲಿ ತುಮಕೂರು ಮತ್ತು ವಿಜಯಪುರದಲ್ಲಿ ಕೈಗಾರಿಕಾ ಪಾರ್ಕ್, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ ಪಾರ್ಕ್, ಉಳಿದ ಭಾಗಗಳಲ್ಲಿ ಡೀಪ್-ಟೆಕ್ ಪಾರ್ಕ್ ಮತ್ತು ಸ್ವಿಫ್ಟ್ ಸಿಟಿ ಮುಂತಾದವು ಅಸ್ತಿತ್ವಕ್ಕೆ ಬರಲಿವೆ. ಡೀಪ್ ಟೆಕ್ ಮತ್ತು ಸ್ವಿಫ್ಟ್ ಸಿಟಿ ಯೋಜನೆಗಳು ತಲಾ 1 ಲಕ್ಷ ಕೋಟಿ ರೂ. ಹೂಡಿಕೆ ಸೆಳೆಯುವ ಮತ್ತು ತಲಾ 1 ಲಕ್ಷ ಉದ್ಯೋಗ ಸೃಷ್ಟಿಸುವಂತಹ ಧಾರಣಾಶಕ್ತಿ ಹೊಂದಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕ್ವಿನ್ ಸಿಟಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಯುಎಸ್ಎನ ನ್ಯೂಯಾರ್ಕ್ನಲ್ಲಿರುವ ಸಂತ ಜಾನ್ಸ್ ವಿಶ್ವವಿದ್ಯಾಲಯ ಸೇರಿದಂತೆ ಸ್ಥಳೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ 10 ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಅಲ್ಲದೇ, ಲಿವರ್ ಪೂಲ್ ವಿಶ್ವವಿದ್ಯಾಲಯದೊಂದಿಗಿನ ರಾಜ್ಯ ಸರಕಾರದ ಸಹಭಾಗಿತ್ವವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಒಡಂಬಡಿಕೆ ಮಾಡಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ವಿಜಯಪುರ ಜಿಲ್ಲೆಗೆ 42 ಸಾವಿರ ಕೋಟಿ ರೂ.ಹೂಡಿಕೆ: ವಿಜಯಪುರ ಜಿಲ್ಲೆಯಲ್ಲಿ 42 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇನ್ನೂ ಕೆಲವು ಒಪ್ಪಂದ ಆಗುವುದರಲ್ಲಿ ಇದ್ದು, ಉತ್ತರ ಕರ್ನಾಟಕಕ್ಕೆ ಒಳ್ಳೆಯ ಅವಕಾಶಗಳು ಮುಂದಿನ ದಿನಗಳಲ್ಲಿ ಸಿಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.