ಇನ್ವೆಸ್ಟ್ ಕರ್ನಾಟಕ-2025 | ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ‘ಅರ್ಥಪೂರ್ಣ’ ತೆರೆ

PC :x/@MBPatil
ಬೆಂಗಳೂರು : ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ವರೆಗೆ ನಡೆದ ಪ್ರತಿಷ್ಠಿತ ‘ಇನ್ವೆಸ್ಟ್ ಕರ್ನಾಟಕ-2025: ಜಾಗತಿಕ ಹೂಡಿಕೆದಾರರ ಸಮಾವೇಶ’ಕ್ಕೆ ಶುಕ್ರವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ‘ಅರ್ಥಪೂರ್ಣ’ವಾಗಿ ತೆರೆಬಿತ್ತು.
5 ಸಾವಿರಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು, ಕೈಗಾರಿಕಾ ಪರಿಣಿತರು ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮಟ್ಟದ ನೀತಿ ನಿರೂಪಕರು ಸಕ್ರಿಯವಾಗಿ ಪಾಲ್ಗೊಂಡಿದ್ದ ಸಮಾವೇಶವು ಬಂಡವಾಳ ಹೂಡಿಕೆಗೆ ಕರ್ನಾಟಕವೇ ಪ್ರಶಸ್ತ ತಾಣ ಎನ್ನುವ ಸಂದೇಶ ತಲುಪಿಸುವಲ್ಲಿ ಯಶಸ್ವಿಯಾಯಿತು.
ಗಣ್ಯಾತಿಗಣ್ಯರು ಮತ್ತು ರಾಜ್ಯ ಸಂಪುಟದ ಹತ್ತಾರು ಸಚಿವರು ಹಾಜರಿದ್ದ ಸಮಾರೋಪ ಸಮಾರಂಭದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು 2025-30ರ ಅವಧಿಯ ವರೆಗಿನ ಪರಿಸರ ಸ್ನೇಹಿ ಸಾರಿಗೆ ನೀತಿಯನ್ನು ಬಿಡುಗಡೆಗೊಳಿಸಿದರು. ಜತೆಗೆ ಇದೇ ವೇದಿಕೆಯಲ್ಲಿ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕಾ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉದ್ಯಮ ಸಂಸ್ಥೆಗಳಿಗೆ ‘ವೆಂಚುರೈಸ್ ಚಾಲೆಂಜ್’ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು. ಇದಕ್ಕೂ ಮೊದಲು ಇದೇ ಪ್ರಥಮ ಬಾರಿಗೆ ಸಾಧಕ ಕಂಪೆನಿಗಳಿಗೆ `ಇನ್ವೆಸ್ಟ್ ಕರ್ನಾಟಕ’, ಎಸ್ಎಂಇ ಕನೆಕ್ಟ್, ವೆಂಚುರೈಸ್ ಚಾಲೆಂಜ್ ಪುರಸ್ಕಾರಗಳನ್ನು ಪ್ರದಾನ ಮಾಡಿದ್ದು, ಈ ಸಮಾವೇಶದ ವಿಶೇಷವಾಗಿತ್ತು.
ಈ ಸಮಾವೇಶದ ನೇತೃತ್ವ ವಹಿಸಿದ್ದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ‘ಮೂರು ವರ್ಷಗಳ ನಂತರ ನಡೆದ ಹೂಡಿಕೆದಾರರ ಸಮಾವೇಶವು ಒಂದು ನಿರ್ಣಾಯಕ ಉದ್ದೇಶದೊಂದಿಗೆ ನಡೆದಿದೆ. ನಾವು ಕೈಗಾರಿಕಾ ಬೆಳವಣಿಗೆಯ ಸಾಂಪ್ರದಾಯಿಕ ಮಾದರಿಗಳಿಂದ ಹೊರಬಂದು, ಆಧುನಿಕ ತಂತ್ರಜ್ಞಾನಾಧಾರಿತ ಉದ್ಯಮಗಳನ್ನು ಬೆಳೆಸಲು ಸಿದ್ಧವಾಗಿದ್ದೇವೆ ಎನ್ನುವ ನಮ್ಮ ಇಚ್ಛಾಶಕ್ತಿಯನ್ನು ನಾವು ತೋರಿದ್ದೇವೆ. ಇದಕ್ಕೆ ತಕ್ಕಂತೆ ನೂತನ ಕೈಗಾರಿಕಾ ನೀತಿ, ಪರಿಸರಸ್ನೇಹಿ ಸಾರಿಗೆ ನೀತಿ, ಎಐ ಆಧರಿತ ಏಕಗವಾಕ್ಷಿ pOರ್ಟಲ್ ಮುಂತಾದವುಗಳನ್ನು ಹೂಡಿಕೆದಾರರಿಗೆ ಕೊಡುಗೆಯಾಗಿ ನೀಡಿದ್ದೇವೆ. ಸಮಾವೇಶದ ಯಶಸ್ಸಿಗೆ ಹೆಗಲು ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಹೇಳಿದರು.
ಈ ಸಮಾವೇಶವು ಹತ್ತರ ಜೊತೆಗೆ ಇನ್ನೊಂದು ಎನ್ನುವಂತೆ ನಡೆಯುವುದಿಲ್ಲ. ಇದರಲ್ಲಿ ಹೊಸತನವಿರುತ್ತದೆ, ಬೆಳವಣಿಗೆಯ ಮರುಪರಿಕಲ್ಪನೆ ಇರಲಿದೆ ಎಂದು ರಾಜ್ಯ ಸರಕಾರದ ಸಚಿವರು ಇದುವರೆಗೆ ಹೇಳಿಕೊಂಡು ಬರುತ್ತಿದ್ದ ಮಾತು ಈ ಮೂರು ದಿನಗಳಲ್ಲಿ ಸಾಕಾರಗೊಂಡಿತ್ತು. ಇದರಿಂದ ಸಂತೃಪ್ತರಾಗಿದ್ದ ಅವರು, ತಮ್ಮ ಮಾತುಗಳಲ್ಲಿ ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಹಿಡಿದು ಕೇಂದ್ರ ಸಚಿವರವರೆಗೆ ಪ್ರತಿಯೊಬ್ಬರನ್ನೂ ಸ್ಮರಿಸಿ, ಧನ್ಯವಾದ ಸಮರ್ಪಿಸಿದರು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಚಾಲನೆ ಪಡೆದ ಸಮಾವೇಶವು 75 ಗೋಷ್ಠಿಗಳು, ಹತ್ತಾರು ಉದ್ಯಮಗಳು ಮತ್ತು ಸರಕಾರದ ನಡುವಿನ ಸಭೆಗಳು, ಲಕ್ಷಾಂತರ ಕೋಟಿ ಹೂಡಿಕೆಯನ್ನು ಹೊತ್ತು ತರಲಿರುವ ಒಡಂಬಡಿಕೆಗಳು, ಕ್ವಿನ್ ಸಿಟಿ ಅಭಿವೃದ್ಧಿ ಕುರಿತ ವಿಚಾರ ವಿನಿಮಯಗಳಿಗೆ ಸಾಕ್ಷಿಯಾಯಿತು.
ಜತೆಗೆ 19 ದೇಶಗಳ ರಾಯಭಾರಿಗಳು, ಕಾನ್ಸುಲ್ ಜನರಲ್ಗಳು, ಉದ್ಯಮ ಸಂಘಟನೆಗಳ ಉನ್ನತ ಪ್ರತಿನಿಧಿಗಳು, ಜಾಗತಿಕ ಮಟ್ಟದ ಕಂಪನಿಗಳ ಸಿಇಒ ಮತ್ತು ಅಧ್ಯಕ್ಷರ ಜತೆ ಕೈಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿಗಳ ಭೇಟಿಯೂ ಸಾಂಗವಾಗಿ ನಡೆಯಿತು. 9 ದೇಶಗಳಿಗೆ ಸಮಾವೇಶದಲ್ಲಿ ಪ್ರತ್ಯೇಕ ಪೆವಿಲಿಯನ್ಗಳನ್ನೇ ನೀಡಲಾಗಿತ್ತು. ಜೊತೆಗೆ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಸಹಕಾರ ಮತ್ತು ಸಹಭಾಗಿತ್ವದ ವಾಗ್ದಾನವನ್ನೂ ಸಮಾವೇಶದಲ್ಲಿ ಕಾಣಲು ಸಾಧ್ಯವಾಯಿತು.
287 ಕಿ.ಮೀ.ವರ್ತುಲ ರೈಲ್ವೆ ಡಿಪಿಆರ್ ಸಿದ್ಧ: ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ, ‘ಬೆಂಗಳೂರು ನಗರವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇಲ್ಲಿನ ಸುಗಮ ಸಂಚಾರ ವ್ಯವಸ್ಥೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೀಳಲಿಗೆ ಮುಂತಾದ ಸುತ್ತಮುತ್ತಲಿನ ಪಟ್ಟಣಗಳನ್ನು ಸಂಪರ್ಕಿಸುವ 287 ಕಿ.ಮೀ. ಉದ್ದದ ವರ್ತುಲ ರೈಲು ಯೋಜನೆಗೆ ಡಿಪಿಆರ್ ಅಂತಿಮ ಹಂತದಲ್ಲಿದೆ. ದೇವನಹಳ್ಳಿಯಲ್ಲಿ ಮೆಗಾ ರೈಲ್ವೆ ಟರ್ಮಿನಲ್ ಕೂಡ ಅಸ್ತಿತ್ವಕ್ಕೆ ಬರಲಿದೆ. ಒಟ್ಟಾರೆ ರಾಜ್ಯದಲ್ಲಿ ರೈಲ್ವೆ ಜಾಲವನ್ನು ಕ್ಷಿಪ್ರಗತಿಯಲ್ಲಿ ವಿಸ್ತರಿಸಲಾಗುತ್ತಿದ್ದು, 2030ರ ವೇಳೆಗೆ ರೈಲು ಮಾರ್ಗಗಳ ಸಂಪೂರ್ಣ ವಿದ್ಯುದೀಕರಣ ಆಗಲಿದೆ’ ಎಂದರು.
ರಾಜ್ಯದಲ್ಲಿ ಕೇಂದ್ರದ ಸಹಯೋಗದೊಂದಿಗೆ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳಿಗೆ 12 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಯು 2027ರ ಕೊನೆಯ ಹೊತ್ತಿಗೆ ಮುಗಿಯುವ ನಿಚ್ಚಳ ಲಕ್ಷಣಗಳು ಕಾಣುತ್ತಿವೆ. ಜಿಲ್ಲಾ ಕೇಂದ್ರಗಳ ಹೊರವಲಯದಲ್ಲಿ ಭೂಮಿ, ವಿದ್ಯುತ್ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಿದರೆ ಕೈಗಾರಿಕಾ ಬೆಳವಣಿಗೆ ಮೂರು ಪಟ್ಟು ಹೆಚ್ಚಾಗಲಿದೆ. ಉದ್ಯಮಿಗಳು ಕೋಲಾರ, ತುಮಕೂರು, ಚಾಮರಾಜನಗರ, ಮೈಸೂರು, ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕಗಳ ಕಡೆಗೂ ಹೋಗಿ, ಬಂಡವಾಳ ಹೂಡಬೇಕು. ರಾಜ್ಯ ಮತ್ತು ಕೇಂದ್ರಗಳು ರೂಪಿಸಿರುವ ಕೈಗಾರಿಕಾ ನೀತಿಗಳು ಇದಕ್ಕೆ ಪೂರಕವಾಗಿಯೇ ಇವೆ ಎಂದು ವಿ.ಸೋಮಣ್ಣ ವಿವರಿಸಿದರು.
ಪಾಟೀಲ್ಗೆ ಮೆಚ್ಚುಗೆಯ ಸುರಿಮಳೆ: ಸಮಾರೋಪದಲ್ಲಿ ಮಾತನಾಡಿದ ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಪ್ರೋಪೆಂಡ್ರಿಯೂ, ಸಂಸದ ಶಶಿ ತರೂರ್, ಕೇಂದ್ರ ಸಚಿವ ವಿ.ಸೋಮಣ್ಣ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೆಲ್ಲರೂ ಸಮಾವೇಶದ ಯಶಸ್ಸಿಗೆ ನಿರಂತರ 6-7 ತಿಂಗಳ ಕಾಲ ಶ್ರಮಿಸಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಮನದುಂಬಿ ಶ್ಲಾಘಿಸಿದರು.