‘ಶಾಸಕರ ಅಮಾನತು ನಿರ್ಣಯ ಕಪ್ಪು ಚುಕ್ಕೆ’ : ಸ್ಪೀಕರ್ ಯು.ಟಿ.ಖಾದರ್ಗೆ ಶಾಸಕ ಸುನಿಲ್ ಕುಮಾರ್ ಪತ್ರ

ವಿ.ಸುನಿಲ್ ಕುಮಾರ್
ಬೆಂಗಳೂರು : ಅಧಿವೇಶನದ ಕೊನೆಯ ದಿನ ಶಾಸಕರನ್ನು ಅಮಾನತು ಮಾಡಲು ಕೈಗೊಂಡ ತಮ್ಮ ನಿರ್ಣಯವು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಪಾಲಿಗೆ ಶಾಶ್ವತ ಕಪ್ಪು ಚುಕ್ಕೆ. ಈಗಲಾದರೂ ತಮ್ಮ ನಿರ್ಣಯವನ್ನು ವಾಪಸ್ ತೆಗೆದುಕೊಳ್ಳುತ್ತೀರಾ? ಎಂದು ಸ್ಪೀಕರ್ ಯು.ಟಿ.ಖಾದರ್ ಗೆ ಶಾಸಕ ವಿ.ಸುನಿಲ್ ಕುಮಾರ್ ಪತ್ರ ಬರೆದು ಪ್ರಶ್ನಿಸಿದ್ದಾರೆ.
ಸದನದಿಂದ ಶಾಸಕರನ್ನು ಅಮಾನತು ಮಾಡುವ ಆದೇಶ ಪ್ರಕಟಿಸುವ ಮುನ್ನ ಬಿಜೆಪಿ, ಜೆಡಿಎಸ್ ಸದಸ್ಯರ ಜೊತೆ ಸಂಧಾನ ಸಭೆ ನಡೆಸದೇ, ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಜೊತೆ ರಹಸ್ಯ ಸಭೆ ನಡೆಸಿದಿರಿ. ಅಧಿವೇಶನದ ಕೊನೆಯ ದಿನ ತೆಗೆದುಕೊಂಡ ಈ ಅಮಾನತು ಆದೇಶ ತಮ್ಮದೋ ಅಥವಾ ಮುಖ್ಯಮಂತ್ರಿ ತಮ್ಮ ಕೈ ಹಿಡಿದು ಬಲವಂತದಿಂದ ಬರೆಸಿದ್ದೋ? ಎಂದು ಅವರು ಕೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕಪ್ರಾಯವಾದ ಹನಿಟ್ರ್ಯಾಪ್ ವಿಚಾರವನ್ನು ಸಚಿವರೊಬ್ಬರು ಸದನದಲ್ಲಿ ಪ್ರಸ್ತಾಪಿಸಿ ಹತಾಶೆ ವ್ಯಕ್ತಪಡಿಸಿದಾಗ ಈ ಬಗ್ಗೆ ತನಿಖೆಯಾಗಬೇಕು, ತನಿಖಾ ಸ್ವರೂಪ ಸದನದಲ್ಲೇ ನಿರ್ಣಯವಾಗಬೇಕು ಎಂದು ಒತ್ತಾಯಿಸುವುದು ಪ್ರತಿಪಕ್ಷದ ನ್ಯಾಯಬದ್ಧ ಕರ್ತವ್ಯ. ಅದನ್ನು ಬಿಜೆಪಿ ಸದಸ್ಯರು ಮಾಡಿದ್ದಾರೆ. ಆದರೆ, ಸರಕಾರ ಹಾಗೂ ಮುಖ್ಯಮಂತ್ರಿ ಇದಕ್ಕೆ ಸ್ಪಂದಿಸದೇ ಇದ್ದಾಗ ನಾವು ಏನು ಮಾಡಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.
ಸದನದಲ್ಲಿ ಪ್ರತಿಭಟನೆ ನಡೆಸುವುದು, ಬಾವಿಗೆ ಇಳಿದು ಘೋಷಣೆ ಹಾಕುವುದು ಸಹಜವಲ್ಲವೇ? ಆದರೆ, ತಾವು ಈ ಪ್ರತಿಭಟನಾ ಸ್ವಾತಂತ್ರ್ಯ ಮೊಟಕು ಮಾಡಿದಿರಿ. ಸದನ ಸ್ವಸ್ಥಿತಿಯಲ್ಲಿ ಇಲ್ಲದೇ ಇರುವಾಗ ಬಜೆಟ್ ನಂತ ಪ್ರಮುಖ ವಿಚಾರದ ಬಗ್ಗೆ ಮುಖ್ಯಮಂತ್ರಿಯ ಉತ್ತರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ವಿಪಕ್ಷಗಳ ಧ್ವನಿಗೆ ಓಗೋಡದೇ ಇದ್ದದ್ದು ಪೀಠಾಸೀನ ಅಧಿಕಾರಿಯ ದಮನಕಾರಿ ಪ್ರವೃತ್ತಿ ಎಂದು ಅಥೈಸಬೇಕಲ್ಲವೇ? ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಇದರಿಂದ ಕೆರಳಿ ಸಭಾಧ್ಯಕ್ಷರ ಪೀಠದತ್ತ ಧಾವಿಸಿದ ಶಾಸಕರ ಸಹಜ ಆಕ್ರೋಶವನ್ನು ನೀವು ಅಶಿಸ್ತು ಎಂದು ಪರಿಗಣಿಸಿ 18 ಜನರನ್ನು ಆರು ತಿಂಗಳು ಕಾಲ ಅಮಾನತುಗೊಳಿಸಿರುವುದು ಈ ಶಾಸನ ಸಭೆಯ ಕರಾಳ ನಿರ್ಣಯ. ಅಷ್ಟಕ್ಕೂ ನೀವು ಅಮಾನತುಗೊಳಿಸಿದ್ದು ಯಾರನ್ನು? ನೀವು ಬೆಳಗ್ಗೆ 7.45ಕ್ಕೆ ಕಲಾಪ ಪ್ರಾರಂಭಿಸಿದಾಗಲು ಶಿಸ್ತಿನಿಂದ ಬಂದು ಕುಳಿತು, ಗಮನ ಸೆಳೆಯುವ ಸೂಚನೆಗಾಗಿ ರಾತ್ರಿ 11 ಗಂಟೆಯವರೆಗೆ ಕಾಯ್ದವರಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಆಡಳಿತ ಪಕ್ಷದ ಸದಸ್ಯರು ಸದನಕ್ಕೆ ಸುಳಿಯದೇ ಇದ್ದರೂ ಸಕಾಲಕ್ಕೆ ಬಂದು ಕೋರಂ ಭರ್ತಿ ಮಾಡಿ ನಿಮ್ಮ ಹಾಗೂ ಪೀಠದ ಗೌರವ ಎತ್ತಿ ಹಿಡಿದವರಲ್ಲವೇ? ಈ ಗೌರವಕ್ಕೆ ಪ್ರತಿಯಾಗಿ ನೀವು ಮಾಡಿದ್ದಾದರೂ ಏನು? ಸಹಜ ಆಕ್ರೋಶವನ್ನು ತಣಿಸುವ ಬದಲು ಅವರ ಅಧಿಕಾರವನ್ನೇ ಮೊಟಕು ಮಾಡಿದಿರಿ ಎಂದು ಸುನಿಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.