ಮುಡಾ ಪ್ರಕರಣ | ಈಡಿ ಸಮನ್ಸ್ ರದ್ದು ಕೋರಿ ಸಿದ್ದರಾಮಯ್ಯ ಪತ್ನಿ ಸಲ್ಲಿಸಿದ್ದ ಅರ್ಜಿ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಭೈರತಿ ಸುರೇಶ್ಗೆ ಈಡಿ (ಜಾರಿ ನಿರ್ದೇಶನಾಲಯ) ನೀಡಿದ್ದ ಸಮನ್ಸ್ಗೆ ನೀಡಲಾಗಿದ್ದ ತಡೆಯನ್ನು ಹೈಕೋರ್ಟ್ ವಿಸ್ತರಿಸಿದೆ ಆದೇಶಿದೆ.
ಈಡಿ ಸಮನ್ಸ್ ರದ್ದು ಕೋರಿ ಪಾರ್ವತಿ, ಸಚಿವ ಭೈರತಿ ಸುರೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು.
ಈ ವೇಳೆ ಜಾರಿ ನಿರ್ದೇಶನಾಲಯದಿಂದ ಸಿಎಂ ಪತ್ನಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಸಿಎಂ ಪತ್ನಿ ಪಾರ್ವತಿ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದಿಸಿ, ಮುಡಾದ 14 ಸೈಟ್ ಗಳನ್ನು ಈಗಾಗಲೇ ಮರಳಿಸಲಾಗಿದೆ. ಸೈಟ್ ಗಳನ್ನು ಮರಳಿಸಿರುವುದಿರಿಂದ ಈಡಿಗೆ ತನಿಖೆ ವ್ಯಾಪ್ತಿ ಇಲ್ಲ. ಅಪರಾಧದಿಂದ ಗಳಿಸಿದ ಸಂಪತ್ತಿದ್ದರೆ ಮಾತ್ರ ಈಡಿ ತನಿಖೆ ನಡೆಸಬಹುದು. ಆದರೆ ಸೈಟ್ ಗಳನ್ನು ಮರಳಿಸಿದ ನಂತರ ಈಡಿ ತನಿಖೆ ಆರಂಭಿಸಿದೆ. ಅಪರಾಧದಿಂದ ಗಳಿಸಿದ ಹಣ ಚಟುವಟಿಕೆಗೆ ಬಳಕೆಯಾಗಬೇಕು. ಇಲ್ಲವಾದರೆ ಪಿಎಂಎಲ್ಎ ಕಾಯ್ದೆಯ ಅಂಶಗಳು ಅನ್ವಯವಾಗುವುದಿಲ್ಲವೆಂದು ವಾದ ಮಂಡಿಸಿದರು.
2024ರ ಅಕ್ಟೋಬರ್ 1ರಂದೇ 14 ಸೈಟ್ ಗಳನ್ನು ಪಾರ್ವತಿ ಹಿಂತಿರುಗಿಸಿದ್ದಾರೆ. ಮುಡಾ ನೀಡಿದ ಸೈಟ್ ಗಳನ್ನು ಅವರು ಅನುಭವಿಸುತ್ತಿಲ್ಲ. ಹೀಗಾಗಿ ಅಪರಾಧದ ಸಂಪತ್ತು ಅವರ ಬಳಿ ಇಲ್ಲವೆಂದು ವಾದಿಸಿದ್ದಾರೆ. ಅಪರಾಧದ ಸಂಪತ್ತನ್ನು ಮುಚ್ಚಿಟ್ಟಿದ್ದರೆ ಆಗ ಈಡಿಗೆ ತನಿಖಾ ವ್ಯಾಪ್ತಿ ಬರುತ್ತದೆ. ಸಂಪತ್ತಿನ ಸ್ವಾಧೀನದಲ್ಲಿದ್ದರೆ, ಅನುಭವಿಸುತ್ತಿದ್ದರೆ ಈಡಿ ವ್ಯಾಪ್ತಿ ಬರುತ್ತದೆ. ಆದರೆ, ಈ ಕೇಸಿನಲ್ಲಿ ಈಡಿ ಇಸಿಐಆರ್ ದಾಖಲಿಸಿದ್ದೇ ಸರಿಯಲ್ಲವೆಂದು ಚೌಟ ವಾದಿಸಿದ್ದರು.
ಹಾಗೆಯೇ, ಎಫ್ಐಆರ್ ದಾಖಲಿಸಿದ 4 ದಿನಗಳಲ್ಲೇ ಈಡಿ ಇಸಿಐಆರ್ ದಾಖಲಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯನ್ನೇ ಈಡಿ ಪುನರಾವರ್ತಿಸುತ್ತಿದೆ. ಈಡಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ14 ಸೈಟ್ ಅಪರಾಧದ ಸಂಪತ್ತೆಂದಿದೆ. ಮುಡಾದ ಬೇರೆ ಸೈಟ್ ಗಳನ್ನೂ ಜಪ್ತಿ ಮಾಡಿದೆ ಎಂದಿದ್ದರು. ಮುಡಾದ 14 ಸೈಟ್ ಗಳಲ್ಲದೇ 1708 ಸೈಟ್ ಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಈಗಾಗಲೇ 160 ಸೈಟ್ ಗಳನ್ನು ಈಡಿ ತಾತ್ಕಾಲಿಕ ಜಪ್ತಿ ಮಾಡಿದೆ. ತನ್ನ ಕಾರ್ಯವ್ಯಾಪ್ತಿ ಮೀರಿ ಈಡಿ ಪರ್ಯಾಯ ತನಿಖೆ ನಡೆಸುತ್ತಿದೆ. ಈಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಭೂಸ್ವಾಧೀನ, ಭೂಪರಿವರ್ತನೆ ಇತ್ಯಾದಿಗಳ ಬಗ್ಗೆಯೂ ತನಿಖೆ ನಡೆಸಿದೆ. ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಈಡಿ ಪ್ರವೇಶಿಸಿದೆ. ಮುಡಾಗೆ ಹಿಂತಿರುಗಿಸಿರುವ 14 ಸೈಟ್ಗಳನ್ನು ಈಡಿ ಜಪ್ತಿ ಮಾಡಿಲ್ಲ. ಆದರೆ ಇತರೆ 160 ಸೈಟ್ ಗಳನ್ನು ಈಡಿ ಜಪ್ತಿ ಮಾಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲವೆಂದು ವರದಿ ಸಲ್ಲಿಸಿದ್ದಾರೆ ಎಂದು ಸಿಎಂ ಪತ್ನಿ ಪಾರ್ವತಿ ಪರ ಸಂದೇಶ್ ಚೌಟ ವಾದ ಮಂಡಿಸಿದ್ದರು.
ಈಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿದ್ದು, ಭ್ರಷ್ಟಾಚಾರ ಹಾಗೂ ಅಪರಾಧದ ಹಣ ಸಯಾಮಿ ಅವಳಿಗಳಂತೆ. ಭ್ರಷ್ಟಾಚಾರ ಆಗುತ್ತಿದ್ದಂತೆ ಅಪರಾಧದ ಹಣ ಸಂಪಾದನೆಯಾಗುತ್ತದೆ. ಖಾಸಗಿ ದೂರಿನಲ್ಲಿ 5 ಸಾವಿರ ಕೋಟಿ ಮುಡಾ ಹಗರಣವನ್ನೂ ಪ್ರಸ್ತಾಪಿಸಲಾಗಿದೆ. ಈ ಖಾಸಗಿ ದೂರನ್ನು ಆಧರಿಸಿಯೇ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೀಗಾಗಿ ಇದು ಕೇವಲ 14 ಸೈಟ್ ಗಳಿಗೆ ಸಂಬಂಧಿಸಿದ ದೂರು ಮಾತ್ರವಲ್ಲ. ಮುಡಾದ ಅಕ್ರಮಗಳ ದೂರಿನ ಬಗ್ಗೆ ಈಡಿ ತನಿಖೆ ನಡೆಸಿದೆ ಎಂದಿದ್ದಾರೆ.
ಮುಡಾದ ಅಪರಾಧದ ಸಂಪತ್ತನ್ನು ಸಂಬಂಧಿಗಳಿಗೆ ಹಸ್ತಾಂತರಿಸಲಾಗಿದೆ. ಪ್ರಭಾವಿ ವ್ಯಕ್ತಿಗಳು ನೆಂಟರ ಹೆಸರಿನಲ್ಲಿ ಸೈಟ್ ಗಳ ಹಂಚಿಕೆ ಪಡೆಯುತ್ತಿದ್ದಾರೆ. ಒತ್ತಡ ಹೇರಿ ಸೈಟ್ ಹಂಚಿಕೆ ಪಡೆದಿದ್ದಾರೆಂದು ಸಾಕ್ಷಿಯೊಬ್ಬರ ಹೇಳಿಕೆ ಇದೆ. ಮುಡಾ ಮಾಜಿ ಆಯುಕ್ತರ ಸಂಬಂಧಿಗಳಿಗೆ ಹಲವು ಸೈಟ್ ಹಂಚಲಾಗಿದೆ. ತಾತ, ಹೆಂಡತಿಯ ತಾತ, ಸಹೋದರನ ಮಗ, ಹೆಂಡತಿಯ ತಾತ ಹೀಗೆ ಹಲವು ಸೈಟ್ ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಈ ಮಾಹಿತಿಯನ್ನು ತನಿಖಾ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಅರವಿಂದ್ ಕಾಮತ್ ವಾದಿಸಿದ್ದಾರೆ.
ಇಸಿಐಆರ್ ದಾಖಲಿಸಿದಾಗ 14 ಸೈಟ್ ಸಿಎಂ ಪತ್ನಿ ವಶದಲ್ಲಿತ್ತು. ಈ 14 ಸೈಟ್ ಅಪರಾಧದ ಸಂಪತ್ತಾಗಿರುವುದರಿಂದ ತನಿಖೆ ಅಗತ್ಯ. ಈ ಸಮನ್ಸ್ ನಲ್ಲಿ ಈಡಿ ಯಾವುದೇ ಆರೋಪಗಳನ್ನು ಮಾಡಿಲ್ಲ. ಕೇವಲ ಸಾಕ್ಷಿಯಾಗಷ್ಟೇ ಈಡಿ ಸಮನ್ಸ್ ಜಾರಿಗೊಳಿಸಿದೆ. ಅವರಿಂದ ಮಾಹಿತಿ ಪಡೆಯಲೆಂದೇ ಈಡಿ ಸಮನ್ಸ್ ಜಾರಿಗೊಳಿಸಿದೆ. ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿರಬಹುದು, ಆದರೆ ಕೋರ್ಟ್ ಇನ್ನೂ ಬಿ ರಿಪೋರ್ಟ್ ಅಂಗೀಕರಿಸಿಲ್ಲ. ಬಿ ರಿಪೋರ್ಟ್ ಪ್ರಶ್ನಿಸಲು ಈಡಿಗೂ ಅಧಿಕಾರವಿದೆ. ಸಚಿವ ಭೈರತಿ ಸುರೇಶ್ ಕಚೇರಿಯಿಂದ ಹಲವು ನಿರ್ದೇಶನಗಳು ಹೋಗಿವೆ. ಸಚಿವ ಭೈರತಿ ಸುರೇಶ್ ಕಚೇರಿಯಿಂದ ಅನುಮೋದನೆ ನೀಡಲಾಗಿದೆ. ಹೀಗಾಗಿ ಸಚಿವ ಸುರೇಶ್ ಗೆ ಈಡಿ ಸಮನ್ಸ್ ನೀಡಿದೆ ಎಂದು ಈಡಿ ಪರ ಎಎಸ್ಜಿ ಅರವಿಂದ್ ಕಾಮತ್ ವಾದ ಮಂಡಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿದೆ.