‘ಕೆಪಿಎಸ್ಸಿ’ ಐಎಎಸ್ ಲಾಬಿಗೆ ಸಿಎಂ ಸಿದ್ದರಾಮಯ್ಯ ಮಣಿಯಬಾರದಿತ್ತು: ನಾರಾಯಣಗೌಡ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೇಳಿಕೆ ಅಧಿಕಾರಶಾಹಿಯ ಪ್ರಭಾವಳಿಯಲ್ಲಿ ಓರ್ವ ಕನ್ನಡಪರ ಚಿಂತನೆಯ ರಾಜಕಾರಣಿ ಅಸಹಾಯಕತೆಯಲ್ಲಿ ಕೈಚೆಲ್ಲಿ ಕುಳಿತಂತೆ ಕಾಣುತ್ತದೆ. ಸಿದ್ಧರಾಮಯ್ಯನವರಂತಹ ಗಟ್ಟಿ ಗುಂಡಿಗೆಯ ನಾಯಕರು ಹೀಗೆ ಐಎಎಸ್ ಲಾಬಿಗೆ ಶರಣಾಗಬಾರದಿತ್ತು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಕೆಪಿಎಸ್ಸಿ ವಿವಾದಗಳ ಕುರಿತಾದ ಸಿಎಂ ಹೇಳಿಕೆ ‘ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ’ ಎಂಬಂತೆ ಕೇಳಿಸುತ್ತದೆ. ಸಿಎಂ ತಮ್ಮ ಮೇಲಿನ ಭಾರವನ್ನು ಕೋರ್ಟ್ಗೆ ಹೊರಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ, ಮರು ಅಧಿಸೂಚನೆ ಹೊರಡಿಸಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ಸುತ್ತ ಇರುವ ಅಧಿಕಾರಶಾಹಿಯ ಲಾಬಿ ಎಂದು ದೂರಿದ್ದಾರೆ.
ಆಯೋಗದ ಸುಧಾರಣೆಗೆ ಸಿಎಂ ಹಲವು ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ. ಅವೆಲ್ಲವೂ ಸ್ವಾಗತಾರ್ಹ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮುಂದೆಂದೂ ತೊಂದರೆಯಾಗದಂತೆ ಪ್ರಶ್ನೆಪತ್ರಿಕೆಗಳನ್ನು ಕನ್ನಡದಲ್ಲಿಯೇ ತಯಾರಿಸಿ, ನಂತರ ಇಂಗ್ಲಿಷ್ಗೆ ಅನುವಾದಿಸುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ತಪ್ಪಿತಸ್ಥ ವಿಷಯ ತಜ್ಞರು, ಭಾಷಾಂತರಕಾರರ ಮೇಲೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಆರೇಳು ತಿಂಗಳಿನಿಂದ ನಾವು ನಡೆಸುತ್ತಿರುವ ಹೋರಾಟಕ್ಕೆ ದೊರೆತ ಭಾಗಶಃ ಗೆಲುವು ಇದು. ನಾವು ಬೀದಿಯಲ್ಲಿ ನಿಂತು ಹೋರಾಡದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೆ, ಈಗಾಗಲೇ ಆಗಿರುವ ಪ್ರಮಾದಕ್ಕೆ ಅವರ ಮಾತುಗಳಲ್ಲಿ ಯಾವ ಉತ್ತರವೂ ಇಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ಕೋರ್ಟ್ ಸರಿಪಡಿಸಬೇಕೇ? ಅದು ಸಿಎಂ ಅವರಿಂದ ಆಗದ ಕೆಲಸವೇ? ಕೆಪಿಎಸ್ಸಿ ಸ್ವಾಯತ್ತ ಸಂಸ್ಥೆ, ಸರಕಾರ ಮಧ್ಯಪ್ರವೇಶಿಸಲು ಆಗದು ಎಂಬ ಇಂಗಿತ ಅವರದು. ಹಾಗೆಂದು ಅನ್ಯಾಯ ನೋಡಿಕೊಂಡು ಸುಮ್ಮನಿರುತ್ತೀರೇ? ನಾವು ಮರುಪರೀಕ್ಷೆ ಮಾಡಿ ಎಂದು ಕೇಳುತ್ತಿಲ್ಲ, ಮರು ಅಧಿಸೂಚನೆ ಹೊರಡಿಸಿ ಎಂದು ಕೇಳುತ್ತಿದ್ದೇವೆ. ಅದು ನಿಮ್ಮ ಕೈಯಲ್ಲೇ ಇದೆಯಲ್ಲವೇ? ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರು, ಅಲ್ಲಿನ ಅಧಿಕಾರಿಗಳು ನಿಮ್ಮ ಮಾತು ಕೇಳೋದಿಲ್ಲವೇ? ಯಾಕಾಗಿ ಈ ಅಸಹಾಯಕತೆಯ ಪ್ರದರ್ಶನ? ಎಂದು ಅವರು ಪ್ರಶ್ನಿಸಿದ್ದಾರೆ.
ಸಿಎಂ ಉತ್ತರ ನೀಡುವಾಗ ಕೆಪಿಎಸ್ಸಿ ಕೊಟ್ಟ ಮಾಹಿತಿಯನ್ನು ಯಥಾವತ್ತಾಗಿ ಓದಿದರು. ಕೆಪಿಎಸ್ಸಿ ಪ್ರಕಾರ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಆದ ದೋಷಗಳ ತನಿಖೆಗೆ ತಜ್ಞರ ಸಮಿತಿಯೊಂದನ್ನು ನೇಮಿಸಿತ್ತು. ಆ ಸಮಿತಿ ಆರು ದೋಷಗಳನ್ನು ಗುರುತಿಸಿ 5 ಕೃಪಾಂಕ ನೀಡಲು ಶಿಫಾರಸು ಮಾಡಿದೆ. ಆರು ದೋಷಗಳಲ್ಲಿ ಮೂರು ದೋಷಗಳು ಇಂಗ್ಲಿಷ್ ಮತ್ತು ಕನ್ನಡ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ ಆಗಿರುವ ಸಾಮಾನ್ಯ ದೋಷ, ಅನುವಾದದ ದೋಷವಲ್ಲ! ಎಂತಹ ಮೋಸ? ಎಂತಹ ದುರಹಂಕಾರದ ಸಮರ್ಥನೆ ಎಂದು ಅವರು ಟೀಕಿಸಿದ್ದಾರೆ.
ಎಸೆಸೆಲ್ಸಿ ಓದಿರುವ ನಮ್ಮ ಹಳ್ಳಿಗಾಡಿನ ಪ್ರತಿಭಾವಂತ ಹೆಣ್ಣುಮಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟರೆ ಆಕೆ ಸಮರ್ಥವಾಗಿ ಆಗಿರುವ ತಪ್ಪುಗಳನ್ನು ಗುರುತಿಸುತ್ತಾಳೆ. ಹೀಗಿರುವಾಗ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ ಆಗಿರುವ 80 ದೋಷಗಳು ಈ ತಜ್ಞರ ಸಮಿತಿಗೆ ಕಾಣಲಿಲ್ಲವೇ? ಹೊಟ್ಟೆಗೆ ಇವರು ಏನು ತಿನ್ನುತ್ತಾರೆ? ಅಥವಾ ಈ ತಜ್ಞರ ಸಮಿತಿಯೆಂಬುದೇ ಕೆಪಿಎಸ್ಸಿ ಆಡಿದ ನಾಟಕವೇ? ಪ್ರತಿಯೊಂದು ತಪ್ಪುಗಳನ್ನೂ ನಾವು ಸಿಎಂ ಗಮನಕ್ಕೆ ತಂದಿದ್ದೆವು. ಹೀಗಿದ್ದಾಗ್ಯೂ ಅವರು ಕೆಪಿಎಸ್ಸಿ ಕೊಟ್ಟ ಸುಳ್ಳು ಉತ್ತರ, ಮೋಸದ ಸಮರ್ಥನೆಯನ್ನೇ ಹೇಳಬೇಕಿತ್ತೇ?’ ಎಂದು ಅವರು ಕೇಳಿದ್ದಾರೆ.
‘ಕೆಪಿಎಸ್ಸಿಯಿಂದ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯಕ್ಕೊಂದು ತಾರ್ಕಿಕ ಅಂತ್ಯ ದೊರೆಯುವವರೆಗೆ ಕರವೇ ಹೋರಾಟ ಮುಂದುವರೆಸುತ್ತದೆ. ನಮಗೆ ಕೋರ್ಟ್ಗಳಾದರೂ ನ್ಯಾಯ ಕೊಡಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳೋಣ. ಅಲ್ಲೂ ನ್ಯಾಯ ಸಿಗದೇ ಇದ್ದರೆ ಮತ್ತೆ ಬೀದಿಯಲ್ಲಿ ನಿಲ್ಲೋಣ. ಈ ನಾಡಿನ ಭವಿಷ್ಯ ರೂಪಿಸಬೇಕಾದ ಯುವಕ/ಯುವತಿಯರನ್ನು ಈ ಸರಕಾರ, ಈ ವ್ಯವಸ್ಥೆ ಏನು ಮಾಡುತ್ತದೆ, ನೋಡಿಯೇ ಬಿಡೋಣ. ನಿಮ್ಮೊಂದಿಗೆ ಕರವೇ ಸದಾ ಇರುತ್ತದೆ’
-ಟಿ.ಎ.ನಾರಾಯಣಗೌಡ ಕರವೇ ರಾಜ್ಯಾಧ್ಯಕ್ಷ