ದಲಿತರಿಗೆ ಅನ್ಯಾಯ ಮಾಡಿದ್ದಕ್ಕೆ ‘ವ್ಹೀಲ್ಚೇರ್’ ಬಂದಿದೆ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ‘ಬಡವರ ಹಣ ನುಂಗಿದ್ದಕ್ಕೆ ನಿಮ್ಮ ಗಂಟಲು ಸರಿ ಇಲ್ಲ. (ದಲಿತರಿಗೆ) ನಮ್ಮ ಜನರಿಗೆ ಅನ್ಯಾಯ ಮಾಡಿ ಓಡಾಡುತ್ತಿದ್ದೀರಲ್ಲ. ಅದಕ್ಕೆ ನೀವು ಕುಂಟುತ್ತಿದ್ದೀರಿ, ಈಗ ‘ವ್ಹೀಲ್ ಚೇರ್’ ಬಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರಿಷತ್ನ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಎಸ್ಸಿಎಸ್ಪಿ- ಟಿಎಸ್ಪಿ ಅನುದಾನ ದುರ್ಬಳಕೆ ಆರೋಪಿಸಿ ಗುರುವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ನಮ್ಮ ಜನರಿಗೆ ಅನ್ಯಾಯ ಮಾಡಿದರೆ ವ್ಹೀಲ್ ಚೇರ್ ಹೋಗಿ ಬೇರೆ ಚೇರ್ ಕೂಡ ಬರುತ್ತದೆ. ನಮ್ಮವರಿಗೆ ಮೋಸ, ಅನ್ಯಾಯ ಮಾಡಬೇಡಿ’ ಎಂದು ಕಿಡಿಕಾರಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳನ್ನ ಜತೆಯಲ್ಲಿ ಇಟ್ಟುಕೊಂಡೇ ಕಸಿ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ನಾವು ಅಧಿಕಾರದಲ್ಲಿ ಇದ್ದಾಗ 14 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಿದ್ದೇವೆ. ಬಿಜೆಪಿ ಸರಕಾರ ಇದ್ದಾಗ ಎಸ್ಸಿ-ಎಸ್ಟಿಯವರು ಕಾರ್ಖಾನೆ ತೆಗೆದರೆ ಶೇ.75ರಷ್ಟು ಸಬ್ಸಿಡಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರಕ್ಕೆ ವಯಸ್ಸಾಗ್ತಾ ಇದೆ. ಈಗಾಗಲೇ ಕಾಲು ಮುರಿದಿದೆ. ಸರಕಾರ ಐಸಿಯುಗೆ ಹೋಗುತ್ತಿದೆ. ಹೋದ ಮೇಲೆ ಮುಂದೆ ಬರುವ ಸರಕಾರ ಬಿಜೆಪಿಯದ್ದು ಎಂದು ಟೀಕಿಸಿದರು.