ಮೈಸೂರು ಲೋಕಾಯುಕ್ತ ಎಸ್ಪಿ ನಾಪತ್ತೆಯಾಗಿದ್ದಾರೆ : ಸ್ನೇಹಮಯಿ ಕೃಷ್ಣ
ಮೈಸೂರು : ಮೈಸೂರು ಲೋಕಾಯುಕ್ತ ಎಸ್ಪಿ ನಾಪತ್ತೆಯಾಗಿದ್ದಾರೆ, ಹುಡುಕಿಕೊಡಿ ಎಂದು ಆರ್.ಟಿ.ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪೊಲೀಸರಿಗೆ ದೂರು ನೀಡಲು ತೆರಳಿದ್ದರಾದರೂ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ತನಿಖೆ ನಡೆಸಿ ವರದಿ ಕೊಡುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲೆ ಗುರುವಾರ ಸ್ನೇಹಮಯಿ ಲೋಕಾಯುಕ್ತ ಕಚೇರಿಗೆ ದೂರು ನೀಡಲು ಆಗಮಿಸಿದ್ದರು. ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಇಲ್ಲದ್ದರಿಂದ ಮಧ್ಯಾಹ್ನದವರೆಗೂ ಕಾದು ಕುಳಿತಿದ್ದರು. ಆದರೆ ಲೋಕಾಯುಕ್ತ ಎಸ್ಪಿ ಮಾತ್ರ ಕಚೇರಿಗೆ ಆಗಮಿಸಲಿಲ್ಲ ಎನ್ನಲಾಗಿದೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ನಾನು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ಪ್ರತಿ ನೀಡಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸುವಂತೆ ಮನವಿ ಮಾಡಲು ಅಗಮಿಸಿದ್ದೆ. ಆದರೆ ಎಸ್ಪಿ ಅವರು ಕಚೇರಿಗೆ ಬರಲಿಲ್ಲ. ನಾನು ದೂರವಾಣಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ, ಸಂದೇಶ ಕಳುಹಿಸಿದರು ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ಲೋಕಾಯುಕ್ತ ಎಸ್ಪಿ ಕಾಣೆಯಾಗಿರಬೇಕು ಎಂದು ದೇವರಾಜ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸುತ್ತೇನೆ ಎಂದು ಹೇಳಿದರು.