ನೈತಿಕ ಅಧಃಪತನ ಪ್ರದರ್ಶಿಸುತ್ತಿರುವ ಬಿಜೆಪಿಗರು : ಕಾಂಗ್ರೆಸ್
ಬೆಂಗಳೂರ : ‘ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ದಲಿತರು, ಹಿಂದುಳಿದ ವರ್ಗದವರು ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುನ್ನೆಲೆಗೆ ಬರುವುದನ್ನು ಸಹಿಸುವುದಿಲ್ಲ’ ಎಂದು ಕಾಂಗ್ರೆಸ್ ಟೀಕಿಸಿದೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ನಮ್ಮ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಾಡಿಸಿದಂತೆಯೇ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪೀಡಿಸಲು ಶುರು ಮಾಡಿರುವ ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಜನತೆ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದೆ.
‘ಒಂದೇ ಒಂದು ವೇದಿಕೆಯಲ್ಲಿ ಕಾಣಿಸಿಕೊಳ್ಳದ, ರಾಜಕೀಯದಿಂದ, ಪ್ರಚಾರದಿಂದ ದೂರವಿರುವ ಸಿದ್ದರಾಮಯ್ಯನವರ ಶ್ರೀಮತಿಯವರ ಹೆಸರು ಹಿಡಿದು ಆಟ ಆಡುತ್ತಿರುವ ಬಿಜೆಪಿಗರು ನೈತಿಕ ಅಧಃಪತನವನ್ನು ಪ್ರದರ್ಶಿಸುತ್ತಿದ್ದಾರೆʼ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಆಕೆ ಯಾವ ತಪ್ಪು ಮಾಡಿದ್ದಾಳೆ?: ‘ಕುರಿ ಕಾಯುವವರ ಮಗ ಎರಡನೇ ಬಾರಿ ಈ ರಾಜ್ಯದ ಸಿಎಂ ಆಗಿರುವುದು ತಪ್ಪಾ? ಸಮಾಜದ ಬಡವರು, ಶೋಷಿತರು, ಅವಕಾಶ ವಂಚಿತ ಜನರ ಪರವಾಗಿ ಯೋಜನೆಗಳನ್ನು ರೂಪಿಸಿದ್ದು ತಪ್ಪಾ? ಈ ಜನರ ಧ್ವನಿಯಾಗಿ ಕೋಮುವಾದ, ದ್ವೇಷ ರಾಜಕೀಯದ ವಿರುದ್ಧ ಮಾತನಾಡುತ್ತಿರುವುದು ತಪ್ಪಾ?. ರಾಜಕೀಯದ ಕಡೆ ಮುಖ ಮಾಡದ ನನ್ನ ಪತ್ನಿಯ ಹೆಸರನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ಎಳೆದು ತಂದಿದ್ದಾರೆ. ಆಕೆ ಯಾವ ತಪ್ಪು ಮಾಡಿದ್ದಾಳೆ?’
-ಸಿದ್ದರಾಮಯ್ಯ, ಮುಖ್ಯಮಂತ್ರಿ