ಕೇಂದ್ರ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳನ್ನು ತಿರಸ್ಕರಿಸಿ : ರಾಜ್ಯ ಸರಕಾರಕ್ಕೆ ಸಂಯುಕ್ತ ಹೋರಾಟ ಸಮಿತಿ ಆಗ್ರಹ

ಬೆಂಗಳೂರು : ‘ನುಡಿದಂತೆ ನಡೆಯುವ ಸರಕಾರ’ ಎಂಬುದನ್ನು ಸಾಬೀತು ಪಡಿಸಿಕೊಳ್ಳಬೇಕೆಂದರೆ, ಕೇಂದ್ರ ಸರಕಾರ ತಂದಿರುವ ಜನವಿರೋಧಿ ನೀತಿಗಳಾದ ಭೂ ಸುಧಾರಣಾ, ಎಪಿಎಂಸಿ, ಜಾನುವಾರು ಹತ್ಯೆ ನಿಷೇಧ, ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ಏರಿಸಿರುವ, ಮತಾಂತರ ನಿಷೇಧ ಕಾಯ್ದೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ರದ್ದುಪಡಿಸುವ ತಿದ್ದುಪಡಿ ಕಾಯ್ದೆಗಳು, ಕೇಂದ್ರದ ವಿದ್ಯುತ್ ಖಾಸಗೀಕರಣ ಮಸೂದೆ, ಲೋಕಸಭಾ ಕ್ಷೇತ್ರದ ಮರು ವಿಂಗಡಣೆ ನೀತಿಗಳನ್ನು ಸಾರಾ ಸಗಟಾಗಿ ತಿರಸ್ಕರಿಸಬೇಕು ಎಂದು ಸಂಯುಕ್ತ ಹೋರಾಟ ಸಮಿತಿಯು ಆಗ್ರಹಿಸಿದೆ.
ಗುರುವಾರ ನಗರದ ಗಾಂಧಿಭವನದಲ್ಲಿ ಸಂಯುಕ್ತ ಹೋರಾಟದಿಂದ ಆಯೋಜಿಸಿದ್ದ ಜನ ಚಳವಳಿಗಳ ಬಜೆಟ್ ಅಧಿವೇಶನ ಕಾರ್ಯಕ್ರಮದಲ್ಲಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಜಂಟಿ ಆಶ್ರಯವು ಹಲವು ತೀರ್ಮಾನಗಳನ್ನು ತೆಗೆದುಕೊಂಡು, ಶಾಸಕ ಬಿ.ಆರ್.ಪಾಟೀಲ್ ಮುಖಾಂತರ ಮುಖ್ಯಮಂತ್ರಿಗೆ ಆಗ್ರಹ ಪತ್ರ ಕಳುಹಿಸಿಕೊಡಲಾಯಿತು.
ಹಿಂಪಡೆದಿದ್ದ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಬಾಗಿಲಿನಿಂದ ತರಲು ಕೇಂದ್ರ ಸರಕಾರ ಮುಂದಿಟ್ಟಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿ, ಕಾರ್ಮಿಕರ ಬದುಕಿಗೆ ಕಂಠಕವಾಗಿರುವ 4 ಕೋಡ್ಗಳನ್ನು ತಿರಸ್ಕರಿಸುವ ತೀರ್ಮಾನವನ್ನು ರಾಜ್ಯ ಸರಕಾರ ಈ ಸದನದಲ್ಲಿಯೇ ತೆಗೆದುಕೊಳ್ಳಬೇಕು. ವಿದ್ಯುತ್ ಕ್ಷೇತ್ರದಲ್ಲಿ ನಡೆಯುತ್ತಿರುವ ಖಾಸಗಿಕರಣದ ಪ್ರಕ್ರಿಯೆ ಕೈಬಿಡಬೇಕು. ರೈತರನ್ನು ಋಣಮುಕ್ತಗೊಳಿಸಲು ಮತ್ತು ರೈತರ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಖಚಿತ ಯೋಜನೆ ಮತ್ತು ಕಾಯ್ದೆ ರೂಪಿಸಬೇಕು ಎಂದು ಸಮಿತಿ ಒತ್ತಾಯಿಸಿತು.
ರೈತರಿಗೆ ಬೆಂಬಲ ಬೆಲೆ ಒದಗಿಸುವ ಸಲುವಾಗಿ ಕನಿಷ್ಠ 10 ಸಾವಿರ ಕೋಟಿ ರೂ.ಗಳನ್ನು ಆವರ್ತ ನಿಧಿಗೆ ಒದಗಿಸಬೇಕು. ಮೈಕ್ರೋಫೈನಾನ್ಸ್ ಜಾಲದಿಂದ ಬಡಜನರನ್ನು ಪಾರು ಮಾಡಲು ಸಾಂಸ್ಥಿಕ ಸಾಲ ಹೆಚ್ಚಿಸುವ ಹಾಗೂ ಸರಳ ವಿಧಾನದಲ್ಲಿ ಒದಗಿಸುವ ತೀರ್ಮಾನ ತೆಗೆದುಕೊಳ್ಳಬೇಕು. ಕೃಷಿ ಕ್ಷೇತ್ರಕ್ಕೆ, ಗ್ರಾಮೀಣಾಭಿವೃದ್ದಿಗೆ ಹಾಗೂ ನೀರಾವರಿಗೆ ಅನುದಾನವನ್ನು ಹೆಚ್ಚಿಸಬೇಕು. ನರೇಗಾ ಯೋಜನೆಯನ್ನು ನಗರಕ್ಕೂ ವಿಸ್ತರಿಸಿ, ಬಲಪಡಿಸವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುವ ನಿರ್ಣಯವನ್ನು ವಿಧಾನ ಸಭೆಯಲ್ಲಿ ತೆಗೆದುಕೊಳ್ಳಬೇಕು ಎಂದು ಸಮಿತಿ ತಿಳಿಸಿತು.
ಸಾರ್ವಜನಿಕ ಸ್ವತ್ತಾದ ಭೂಮಿ ಬಂಡವಾಳಿಗರ ಪಾಲಾಗದಂತೆ ತಡೆಯಬೇಕು. ಭೂಮಿ ಸಾಮಾಜಿಕ ನ್ಯಾಯದ ಪ್ರಮುಖ ಆಯಾಮವಾಗಿ ಪರಿಗಣಿಸಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಿಸಬೇಕು. ಬಗರ್ ಹುಕುಂ ರೈತರಿಗೆ ತ್ವರಿತ ಭೂ ಹಂಚಿಕೆಯ ತೀರ್ಮಾನ ತೆಗೆದುಕೊಳ್ಳಬೇಕು. ಕಾನೂನು ತೊಡಕುಗಳನ್ನು ನಿವಾರಿಸಿ ಎಲ್ಲ ಬಡವರಿಗೆ ಬಗರ್ ಹುಕುಂ ರೈತರಿಗೂ ಸಾಮಾಜಿಕ ನ್ಯಾಯ ದಕ್ಕಿಸಿಕೊಡಬೇಕು. ಚನ್ನರಾಯಪಟ್ಟಣ ಭೂಸ್ವಾಧೀನ ತೀರ್ಮಾನವನ್ನು ಕೊಟ್ಟ ಮಾತಿನಂತೆ ಕೈಬಿಡಬೇಕು ಎಂದು ಸಮಿತಿ ಸದಸ್ಯರು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳ ಮೀಸಲು ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಕ್ರಮವಹಿಸಬೇಕು. ಎಸ್ಸಿಪಿ,ಟಿಎಸ್ಪಿ ಹಣದ ವಿತರಣೆ ವಿನಿಯೋಗ ಸಾಧಕ-ಭಾದಕಗಳ ಕುರಿತು ಚರ್ಚಿಸಲು ಎರಡೂವರೆ ವರ್ಷಕ್ಕೊಮ್ಮೆ ‘ಸಾಮಾಜಿಕ ನ್ಯಾಯಕ್ಕಾಗಿ ವಿಶೇಷ ಅಧಿವೇಶನ’ವನ್ನು ನಡೆಸಿ ಮೌಲ್ಯಮಾಪನ ಮಾಡಬೇಕು. ಖಾಸಗಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ ನಿಲ್ಲಿಸಿರುವ ತೀರ್ಮಾನ ಹಿಂತೆಗೆದುಕೊಳ್ಳಬೇಕು. ಖಾಯಂ ಸ್ವರೂಪದ ಕ್ಷೇತ್ರಗಳಲ್ಲಿರುವ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಕಾಯ್ದೆ ರೂಪಿಸಬೇಕು. ಎಲ್ಲ ಬಗೆಯ ದುಡಿಯುವ ಜನರಿಗೆ ಕನಿಷ್ಟ ವೇತನ ದರ ಜಾರಿಯಾಗುವಂತೆ ಮಾಡಬೇಕು ಎಂದು ಸಮಿತಿ ಆಗ್ರಹಿಸಿತು.
ಕರ್ನಾಟಕ ಕಾರ್ಮಿಕ ಸಮ್ಮೇಳನ ಆಯೋಜಿಸಲು ತೀರ್ಮಾನ ತೆಗೆದುಕೊಳ್ಳಬೇಕು. ಹೆಚ್ಚುತ್ತಿರುವ ಜಾತಿ ದೌರ್ಜನ್ಯ, ಕೋಮು ಪ್ರಚೋದನೆ, ಅತ್ಯಾಚಾರ, ಹತ್ಯೆಗಳನ್ನು ತಡೆಯಲು ಸಮಗ್ರ ಯೋಜನೆ ರೂಪಿಸಬೇಕು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಸುವ, ಷಡ್ಯಂತರ ರೂಪಿಸುವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ವಿಶೇಷ ಕಾಯ್ದೆ ಜಾರಿಗೆ ತರಬೇಕು. ಶಿಕ್ಷಣ ನೀತಿಯಲ್ಲಿನ ದ್ವಂದ್ವ ನಡೆಯನ್ನು ಕೈಬಿಡಬೇಕು. ಎಸ್ಇಪಿ ಕಾಲಮಿತಿಯೊಳಗೆ ಜಾರಿಗೆ ತರಬೇಕು. ಸಾರ್ವಜನಿಕ ಶಿಕ್ಷಣಕ್ಕೆ ಮೀಸಲಿಟ್ಟಿರುವ ಹಣ ದುಪ್ಪಟ್ಟುಗೊಳಿಸಬೇಕು. ಉದ್ಯೋಗ ಸೃಷ್ಟಿಗೆ ಸಮಗ್ರ ಯೋಜನೆ ರೂಪಿಸಬೇಕು ಎಂದು ಸಮಿತಿ ತಿಳಿಸಿತು.
ಸಂಪುಟ ಸಚಿವರು, ಸಂಬಂಧಿತ ಅಧಿಕಾರಿಗಳು ಹಾಗೂ ಜನಚಳವಳಿಗಳ ಪ್ರತಿನಿಧಿಗಳು ಜೊತೆಗೂಡಿ ಚರ್ಚಿಸಿ ಸರ್ವಸಮ್ಮತ ಆಧಾರದ ಮೇಲೆ ಕೆಲವಾದರೂ ಅತಿಮುಖ್ಯ ಜನರ ಸಮಸ್ಯೆಗಳಿಗೆ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುವಂತಾಗಬೇಕು. ಕೇಂದ್ರ ಸರಕಾರ ಹೊರಟಿರುವ ಕಾರ್ಪೊರೇಟ್ ಕೇಂದ್ರಿತ ಅಭಿವೃದ್ದಿಯ ಹಾದಿಯನ್ನು ತೊರೆದು, ಜನ ಕೇಂದ್ರಿತ ಹೊಸ ಮಾದರಿಯನ್ನು ಕರ್ನಾಟಕ ಕಟ್ಟಿಕೊಡಲು ದಿಟ್ಟ ಹೆಜ್ಜೆಗಳನ್ನು ಮುಖ್ಯಮಂತ್ರಿ ಇಡಬೇಕು ಎಂದು ಸಂಯುಕ್ತ ಹೋರಾಟ ಸಮಿತಿಯು ಆಗ್ರಹಿಸಿತು.
ಅಧಿವೇಶನದಲ್ಲಿ ಸಂಯುಕ್ತ ಹೋರಾಟದ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಯಶ್ವಂತ ಟಿ., ಕೆ.ವಿ.ಭಟ್, ವರಲಕ್ಷ್ಮೀ, ಚಾಮರಸ ಪಾಟೀಲ್, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ನೂರ್ ಶ್ರೀಧರ್, ಚಿಂತಕ ಎಸ್.ಆರ್.ಹೀರೇಮಠ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.