ಕ್ಷೇತ್ರ ಮರುವಿಂಗಡಣೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು : ಜಾಗೃತ ಕರ್ನಾಟಕ

ಬೆಂಗಳೂರು : ಸಂವಿಧಾನವನ್ನು ಬದಲಿಸಲು ಅಗತ್ಯವಿರುವ ಮೂರನೇ ಎರಡು ಬಹುಮತವನ್ನು ಪಡೆದುಕೊಳ್ಳುವುದಕ್ಕಾಗಿಯೇ, ಬಿಜೆಪಿ ಪಕ್ಷವು ‘ಕ್ಷೇತ್ರ ಮರುವಿಂಗಡಣೆ’ ಮಾಡುವುದಕ್ಕೆ ಹೊರಟಿರುವುದು. ಹೀಗಾಗಿ ಈ ಲೋಕಸಭಾ ಕ್ಷೇತ್ರಗಳ ದೇಶವ್ಯಾಪಿ ಕ್ಷೇತ್ರ ಮರುವಿಂಗಡಣೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಜಾಗೃತ ಕರ್ನಾಟಕ ಆಗ್ರಹಿಸಿದೆ.
ಗುರುವಾರ ನಗರದ ಗಾಂಧಿ ಭವನದಲ್ಲಿ ಜಾಗೃತ ಕರ್ನಾಟಕದ ವತಿಯಿಂದ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ತೆಗೆದುಕೊಂಡು ತೀರ್ಮಾಣಗಳನ್ನು ತಿಳಿಸಿದ ಸಂಚಾಲಕ ಮುತ್ತುರಾಜು, ಕ್ಷೇತ್ರ ಮರುವಿಂಗಡಣೆಯನ್ನು ಎರಡು ಬಾರಿ ಬೇರೆ ಬೇರೆ ರಾಜಕೀಯ ಪಕ್ಷಗಳ ನೇತೃತ್ವದ ಕೇಂದ್ರ ಸರಕಾರಗಳು 25 ವರ್ಷಗಳ ಕಾಲ ಮುಂದೂಡಿದ್ದವು. ಈ ಅಸಮಾನ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳು ಹಾಗೂ ಇನ್ನಿತರ ಕೆಲವು ರಾಜ್ಯಗಳ ಪ್ರಾತಿನಿಧ್ಯ ಗಣನೀಯವಾಗಿ ಕಡಿಮಯಾಗಲಿದೆ ಎಂದು ಹೇಳಿದರು.
ಕ್ಷೇತ್ರ ಮರುವಿಂಗಡಣೆಯು ದೇಶದ ಒಕ್ಕೂಟ ವ್ಯವಸ್ಥೆಯ ಸ್ವರೂಪವನ್ನೇ ಬದಲಿಸಲಿದೆ. ದೇಶದಲ್ಲಿ ಹತ್ತು ಹಲವು ರೀತಿಯ ಕ್ಷೋಭೆಗೆ ಕಾರಣವಾಗಲಿದೆ. ಒಕ್ಕೂಟ ತತ್ವವು ಈ ದೇಶದ ಹುಟ್ಟಿಗೆ ಕಾರಣವಾದ ಸ್ವಾತಂತ್ರ್ಯ ಆಂದೋಲನ ಮತ್ತು ಸಂವಿಧಾನದ ಮೂಲ ಆಶಯಗಳ ಭಾಗ. ಅದರಲ್ಲಿ ರಾಜಿ ಮಾಡಿಕೊಳ್ಳುವ ಯಾವುದೇ ಸರಕಾರ ಅಥವಾ ಪಕ್ಷದ ಧೋರಣೆಯು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಅಪಾಯವಿದೆ. ಸಂವಿಧಾನದ ಮೂಲ ಆಶಯಗಳ ಭಾಗವಾಗಿರುವ ಒಕ್ಕೂಟ ತತ್ವದ ವಿರುದ್ಧ ಈ ಮರುವಿಂಗಡಣೆಯ ಪ್ರಸ್ತಾಪ ಇದೆ ಎಂದು ಮುತ್ತುರಾಜು ತಿಳಿಸಿದರು.
ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಕ್ಷೇತ್ರ ಮರುವಿಂಗಡಣೆಯ ಕುರಿತು ಇರುವ ತಮ್ಮ ನಿಲುವನ್ನು ಬಹಿರಂಗವಾಗಿ ಸ್ಪಷ್ಟಪಡಿಸಬೇಕು. ರಾಜ್ಯದ ಜನತೆಯು ಈ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ. ಕ್ಷೇತ್ರ ಮರುವಿಂಗಡಣೆಯ ಮಾಹಿತಿ ಮತ್ತು ಸೀಟುಗಳನ್ನು ಹೆಚ್ಚಿಸಿ, ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣ ತಗ್ಗಿಸುವ ಹುನ್ನಾರ ಎಲ್ಲರಿಗೂ ತಿಳಿಸುವ ಅಗತ್ಯವೂ ಇದೆ ಎಂದರು.
ಮೊದಲ ಹಂತದಲ್ಲಿ ರಾಜ್ಯದ ಜನಪ್ರತಿನಿಧಿಗಳು, ಅದರಲ್ಲೂ ಲೋಕಸಭಾ ಸದಸ್ಯರು, ಸಾಹಿತಿಗಳು, ಹೋರಾಟಗಾರರು, ಧಾರ್ಮಿಕ ಮುಖಂಡರು, ಸಮುದಾಯಗಳ ಮುಖಂಡರು ಎಲ್ಲರೂ ಕೇಂದ್ರ ಸರಕಾರಕ್ಕೆ ಪತ್ರ ಬರೆದು ತಮ್ಮ ವಿರೋಧವನ್ನು ದಾಖಲಿಸಬೇಕು. ಅದಕ್ಕಾಗಿ ಒಂದು ಮನವಿ ಪತ್ರದ ಮುಖಾಂತರ ಅಂಥವರನ್ನು ಭೇಟಿ ಮಾಡಿ ಪತ್ರ ಬರೆಯಲು ಒತ್ತಾಯಿಸಲಿದ್ದೇವೆ. ರಾಜ್ಯದ ಎಲ್ಲೆಡೆ ವಿಧಾನಸಭಾ ಕ್ಷೇತ್ರವಾರು ಕಾರ್ಯಕ್ರಮಗಳನ್ನು ಸಂಘಟಿಸಲೂ ಸಮಾನ ಮನಸ್ಕರು ಒಗ್ಗೂಡಿ ಪ್ರಯತ್ನ ಮಾಡಲಿದ್ದೇವೆ ಎಂದು ಮುತ್ತುರಾಜು ಮಾಹಿತಿ ನೀಡಿದರು.
ದುಂಡು ಮೇಜಿನ ಸಭೆಯಲ್ಲಿ ದಲಿತ ಮುಖಂಡ ಬಸವರಾಜ್ ಕೌತಾಳ್, ಡಾ.ಸುನೀಲ್ ಕುಮಾರ್ ಡಿ.ಆರ್., ಪತ್ರಕರ್ತರಾದ ಡಿ.ಉಮಾಪತಿ, ಜಾಗೃತ ಕರ್ನಾಟಕದ ಡಾ.ವಾಸು ಎಚ್.ವಿ., ಬಿ.ಸಿ.ಬಸವರಾಜು, ರಾಜಶೇಖರ್ ಅಕ್ಕಿ, ಸುಹೇಲ್ ಅಹಮದ್, ಸ್ವಾತಿ, ಸಾಮಾಜಿಕ ಹೋರಾಟಗಾರರಾದ ನಗರಗೆರೆ ರಮೇಶ್, ಆದರ್ಶ್ ಅಯ್ಯರ್, ರಮೇಶ್ ಬೆಲ್ಲಂಕೊಂಡ, ವಕೀಲ ಎಚ್.ಮಹದೇವಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.