ಸಾವಯವ ಸಿರಿಧಾನ್ಯ ಮೇಳಕ್ಕೆ ತೆರೆ ; 185.41 ಕೋಟಿ ರೂ. ಒಪ್ಪಂದ : ಸಚಿವ ಎನ್.ಚಲುವರಾಯಸ್ವಾಮಿ

ಎನ್.ಚಲುವರಾಯಸ್ವಾಮಿ
ಬೆಂಗಳೂರು : ಈ ಬಾರಿಯ ಸಾವಯವ ಸಿರಿಧಾನ್ಯ ಅಂತರ್ ರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಒಟ್ಟು 185 ಬಿ2ಬಿ ಸಭೆಗಳಲ್ಲಿ 194 ಉತ್ಪಾದಕರು 105 ಮಾರಾಟ ಸಂಸ್ಥೆಗಳು ಪಾಲ್ಗೊಂಡಿದ್ದು, ಒಟ್ಟಾರೆ 185.41 ಕೋಟಿ ರೂ.ಗಳ ಒಪ್ಪಂದ ಏರ್ಪಟ್ಟಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೇಳದ ಪ್ರದರ್ಶನ ಮಳಿಗೆಗಳಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ವಹಿವಾಟು ನಡೆದಿದೆ. ಅಂದಾಜು 3 ಲಕ್ಷ ಮಂದಿ ಮೇಳಕ್ಕೆ ಆಗಮಿಸಿದ್ದಾರೆ. ದೇಶದ 25 ರಾಜ್ಯಗಳು ಮೇಳದಲ್ಲಿ ಭಾಗವಹಿಸಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಮಾಹಿತಿ ನೀಡಿದರು.
5 ರಾಜ್ಯಗಳ ಕೃಷಿ ಸಚಿವರು ಮೇಳದಲ್ಲಿ ಭಾಗವಹಿಸಿದ್ದರು. ಇತರ ರಾಜ್ಯಗಳು ಕರ್ನಾಟಕದ ಈ ಅಂತರ್ರಾಷ್ಟ್ರೀಯ ಮೇಳಕ್ಕೆ ಆಗಮಿಸಿ ಅಧ್ಯಯನ ನಡೆಸಿದ್ದು, ಇದೇ ಮಾದರಿಯಲ್ಲಿ ತಮ್ಮ ರಾಜ್ಯದಲ್ಲಿಯೂ ಸಿರಿಧಾನ್ಯ ಮೇಳ ಆಯೋಜಿಸುವುದಾಗಿ ಹೇಳಿದ್ದಾರೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ದೇಸಿ ಪೆವಿಲಿಯನ್ ಎಲ್ಲರ ಆಕರ್ಷಣೆ ಪಡೆದಿದೆ. ರೈತರೇ ನೇರವಾಗಿ ಈ ಮೇಳದಲ್ಲಿ ಪಾಲ್ಗೊಂಡಿದ್ದು ಅವರನ್ನು ಸನ್ಮಾನಿಸಿ ಪ್ರೋತ್ಸಾಹ ನೀಡಲಾಗಿದೆ. ಇದು ರೈತ ಸಮಯದಾಯಕ್ಕೆ ಸಲ್ಲುತ್ತಿರುವ ಗೌರವ ಎಂದೇ ನಾನು ಭಾವಿಸುತ್ತೇನೆ. ಮೌಲ್ಯವರ್ಧಿತ ಕೃಷಿ ಉತ್ಪನ್ನಗಳನ್ನು ಜನರು ಮುಗಿಬಿದ್ದು ಖರೀದಿಸುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ನೂರಾರು ಯುವಜನರು ಕೃಷಿ ಉತ್ಪನ್ನಗಳ ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿ,ಮಾರಾಟ ರಪ್ತು ಉದ್ಯಮದಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ. ಮುಂದೆ ಕೃಷಿ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯ ವರ್ಧಿನೆಗೆ ಇರುವ ಉಜ್ವಲ ಭವಿಷ್ಯವನ್ನು ಸೂಚಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.