ಕೇಂದ್ರ 22.50 ಬೆಲೆಗೆ ಅಕ್ಕಿ ಕೊಟ್ಟರೂ ಖರೀದಿಸದ ರಾಜ್ಯ ಸರಕಾರ : ಪ್ರಹ್ಲಾದ್ ಜೋಶಿ ಆರೋಪ

ಪ್ರಹ್ಲಾದ್ ಜೋಶಿ | PTI
ಬೆಂಗಳೂರು : ಕೇಂದ್ರ ಸರಕಾರ ರಾಜ್ಯಕ್ಕೆ 22.50 ಕನಿಷ್ಠ ಬೆಲೆಗೆ ಅಕ್ಕಿ ಕೊಟ್ಟು ವಾರ್ಷಿಕ 2280 ಕೋಟಿ ಉಳಿಸಿಕೊಡಲು ಮುಂದಾದರೆ ರಾಜ್ಯ ಸರಕಾರವೇ ಇದಕ್ಕೆ ಸಿದ್ಧವಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ರಾಜ್ಯ ಸರಕಾರ 34ರ ದರದಲ್ಲಿ ಅಕ್ಕಿ ಖರೀದಿಸಬೇಕಾಗುತ್ತದೆ. ಆದರೆ, ಕೇಂದ್ರ ಸರಕಾರ 10 ಕಡಿಮೆ ಮಾಡಿ ಕೇವಲ 22.50 ಬೆಲೆಗೆ ಕೊಡುತ್ತೇವೆಂದರೂ ಖರೀದಿಸಲು ಮುಂದೆ ಬಂದಿಲ್ಲ. ಕೇಂದ್ರದಿಂದ 22.50 ಗೆ ಅಕ್ಕಿ ಖರೀದಿಸಿದಲ್ಲಿ ರಾಜ್ಯ ಸರಕಾರಕ್ಕೆ ವಾರ್ಷಿಕ 2280 ಕೋಟಿ ಉಳಿತಾಯವಾಗುತ್ತದೆ. ಆದರೆ, ಇದಕ್ಕೆ ಮುಂದಾಗದ ಸಿದ್ದರಾಮಯ್ಯ ಸರಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಜೋಶಿ ಹೇಳಿದ್ದಾರೆ.
ರಾಜ್ಯಕ್ಕೆ ಎಷ್ಟು ಬೇಕಾದರೂ ಅಕ್ಕಿ ಪೂರೈಸಲು ಕೇಂದ್ರ ಸರಕಾರ ಸಿದ್ಧವಿದೆ ಎಂಬುದನ್ನು ಹೇಳಿದ್ದೇವೆ. ಹಾಗಿದ್ದರೂ ಸಿದ್ದರಾಮಯ್ಯ ಸರಕಾರ ಕೇಂದ್ರದಿಂದ ಅಕ್ಕಿ ಖರೀದಿಸಲು ಸಿದ್ಧವಿದ್ದಂತಿಲ್ಲ ಎಂದಿದ್ದಾರೆ.
ರಾಜ್ಯದ ಜನತೆಗೆ ಗ್ಯಾರೆಂಟಿಗಳ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ, ಯಾವುದನ್ನೂ ಸರಿ ನೀಡುತ್ತಿಲ್ಲ. ಅಕ್ಕಿ ಬದಲು ನೀಡುತ್ತಿದ್ದ ಹಣ, ಗೃಹಲಕ್ಷ್ಮಿ ಹಣ ನೀಡದೆ ರಾಜ್ಯದ ಜನತೆಗೆ ಗ್ಯಾರೆಂಟಿ ಮೋಸ ಮಾಡಿದೆ ಎಂದು ಟೀಕಿಸಿದ್ದಾರೆ.
ಮುಂದಾಲೋಚನೆ ಇಲ್ಲದ ಅವೈಜ್ಞಾನಿಕ ರೀತಿಯ ಯೋಜನೆಗಳ ಘೋಷಣೆ, ಅನುಷ್ಠಾನದಿಂದಾಗಿ ರಾಜ್ಯ ಕಾಂಗ್ರೆಸ್ ಸರಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದೆ. ಇತ್ತ, ಜನರಿಗೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಈ ಸರಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.