ಸಂಸತ್ತಿನ ಕಲಾಪಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಪ್ರಶ್ನೆ ಕೇಳುವ ಅವಕಾಶ ದೊರೆಯಲಿ : ಟಿ.ಎ.ನಾರಾಯಣಗೌಡ

ಬೆಂಗಳೂರು : ಕೇಂದ್ರದ ಸಂಸತ್ತಿನ ಕಲಾಪಗಳಲ್ಲಿ ಎಲ್ಲ ಪ್ರಾದೇಶಿಕ ರಾಜ್ಯ ಭಾಷೆಗಳಲ್ಲೂ ಪ್ರಶ್ನೆ ಕೇಳುವ, ಮಾತನಾಡುವ ಅವಕಾಶ ದೊರೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮನವಿ ಮಾಡಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಹೆಸರಾಯಿತು ಕರ್ನಾಟಕ 50ರ ಸಂಭ್ರಮ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಭಾಷಾವಾರು ರಾಜ್ಯಗಳನ್ನು ವಿಂಗಡಣೆ ಮಾಡಲಾಗಿದ್ದು, ಕೇಂದ್ರದ ಸಂಸತ್ತಿನ ಅಧಿವೇಶನಗಳಲ್ಲೂ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳಲ್ಲಿ ಪ್ರಶ್ನೋತ್ತರಗಳು ನಡೆಯಲು ಅವಕಾಶ ದೊರೆಯಬೇಕು. ಪ್ರಾದೇಶಿಕ ಭಾಷೆಗಳಲ್ಲಿ ಕೇಂದ್ರದಲ್ಲಿ ಮಾತನಾಡುವಂತಹ ಹಕ್ಕು ನಮಗೂ ಇದೆ. ಆದ್ದರಿಂದ ಕೇಂದ್ರ ಸರಕಾರಕ್ಕೆ ಮನವಿಯನ್ನು ಪುರಸ್ಕರಿಸುವಂತೆ ಮನವಿ ಮಾಡುತ್ತೇನೆ ಎಂದರು.
ವಿಧಾನಸೌಧದಲ್ಲಿ ಇರುವವರು ಬೇರೆ ಬೇರೆ ಕಾರಣಗಳಿಗೆ ಜೈಲಿಗೆ ಹೋಗುತ್ತಾರೆ. ಆದರೆ, ನಾವು ಹೋರಾಟಗಾರರು ನಾಡು, ನುಡಿಗಾಗಿ ಹತ್ತಾರು ಸಲ ಕಾರಾಗೃಹ ವಾಸ ಅನುಭವಿಸಿದ್ದೇವೆ. ಕನ್ನಡಕ್ಕಾಗಿ ಬದುಕಿದ್ದೇವೆ, ಕನ್ನಡಕ್ಕಾಗಿ ಸಾಯುತ್ತೇವೆ ಎಂದು ಟಿ.ಎ.ನಾರಾಯಣಗೌಡ ಹೇಳಿದರು.