ಅನಧಿಕೃತ ಮರಳು ಸಾಗಾಟ; 7,629 ಎಫ್ಐಆರ್ ದಾಖಲು, 47 ಕೋಟಿ ರೂ. ದಂಡ ವಸೂಲಿ : ಸಚಿವ ಮಲ್ಲಿಕಾರ್ಜುನ್

ಬೆಂಗಳೂರು : ಹಿಂದಿನ ಐದು ವರ್ಷಗಳಲ್ಲಿ ಅನಧಿಕೃತವಾಗಿ ಮರಳು ಸಾಗಾಟ ಮಾಡಿದವರ ವಿರುದ್ಧ 23,572 ಪ್ರಕರಣಗಳನ್ನು ಪತ್ತೆ ಹಚ್ಚಿ 7,629 ಎಫ್ಐಆರ್ ದಾಖಲಿಸಲಾಗಿದ್ದು, 47 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಾ.ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅನಧಿಕೃತವಾಗಿ ಮರಳು ಸಾಗಾಣಿಕೆ ತಡೆಯಲು ಕಾರ್ಯಪ್ರವೃತ್ತರಾಗಿದ್ದು, ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಮರಳು ಸಮಿತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹಿಂದಿನ ಐದು ವರ್ಷಗಳಲ್ಲಿ ಕಾನೂನು ಬಾಹಿರವಾಗಿ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದವರಿಂದ 47 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು 260 ಮರಳು ಬ್ಲಾಕ್ಗಳು ಹಾಗೂ 879 ಎಂ-ಸ್ಟಾಂಡ್ ಬ್ಲಾಕ್ಗಳಿವೆ. 2023-24ನೇ ಸಾಲಿನಲ್ಲಿ 24,10,236 ಮೆಟ್ರಿನ್ ಟನ್ ಮರಳಿನಿಂದ 35.68 ಕೋಟಿ ರೂ. ರಾಜಧನ ಸಂಗ್ರಹಿಸಲಾಗಿದೆ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ವಿವರಿಸಿದರು.
ಅನಧಿಕೃತ ಮರಳು ಹಾಗೂ ಇತರ ಉಪಖನಿಜ ಗಣಿಗಾರಿಕೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್ ಪೊರ್ಸ್ ಮರಳು ಸಮಿತಿ ರಚಿಸಲಾಗಿದೆ. ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ತನಿಖಾ ಠಾಣೆ ಹಾಗೂ ಚಾಲಿತದಳ ತಂಡ ರಚಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.