ಸರಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ; ಸದನದ ಒಳ-ಹೊರಗೆ ಬಿಜೆಪಿ ಹೋರಾಟ: ವಿಜಯೇಂದ್ರ

ಬೆಂಗಳೂರು: ‘ಮುಸ್ಲಿಮ್ ಸಮುದಾಯಕ್ಕೆ ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ತಂದರೆ ಅದನ್ನು ವಿರೋಧಿಸಿ ಸದನದ ಒಳಗೆ ಮತ್ತು ಹೊರಗಡೆ ಬಿಜೆಪಿ ಹೋರಾಟ ಮಾಡಲಿದೆ. ಅಲ್ಲದೆ, ಇದನ್ನು ಅನುಷ್ಠಾನಗೊಳಿಸಲು ಅವಕಾಶ ಕೊಡುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ಸಿನ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಇಂದು ನಿನ್ನೆಯದಲ್ಲ. ಮುಸಲ್ಮಾನರಿಗೆ ಖುಷಿ ಪಡಿಸಲು ನೀವು ಯಾವ ಮಟ್ಟಕ್ಕಾದರೂ ಇಳಿಯುತ್ತೀರಿ. ಎಲ್ಲ ವರ್ಗದಲ್ಲೂ ಬಡವರಿದ್ದಾರೆ. ಅವರೇನು ಅಪರಾಧ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗಗಳ ಪ್ರವರ್ಗ 2 ‘ಬಿ’ ಅಡಿಯಲ್ಲಿ ಜೈನರು ಬರುತ್ತಾರಾ? ಮುಸಲ್ಮಾನರು ಬಿಟ್ಟರೆ ಯಾರು ಬರುತ್ತಾರೆ. ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ಆದರೆ, ಅಲ್ಪಸಂಖ್ಯಾತರ ಅಥವಾ ಮುಸ್ಲಿಮರ ತುಷ್ಟೀಕರಣದ ರಾಜಕೀಯ ನೀತಿಯನ್ನು ಸರಕಾರ ಅನುಸರಿಸುತ್ತಿದ್ದು, ಇದನ್ನು ನಾವು ವಿರೋಧಿಸುತ್ತೇವೆ ಎಂದರು.