ವಿನಯ್ ಸೋಮಯ್ಯ ಆತ್ಮಹತ್ಯೆ : ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್ಐಆರ್

ವಿನಯ್ ಸೋಮಯ್ಯ
ಬೆಂಗಳೂರು: ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡನ ವಿರುದ್ಧ ಹೆಣ್ಣೂರು ಠಾಣೆ ಪೊಲೀಸರು ಎಫ್ಐಆರ್ ದಾಖಲಾಗಿದೆ.
ವಿನಯ್ ಸೋಮಯ್ಯ ಸಹೋದರ ಜೀವನ್ ಹೆಣ್ಣೂರು ಠಾಣಾ ಪೊಲೀಸರಿಗೆ 6 ಪುಟಗಳ ದೂರನ್ನು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಕಾಂಗ್ರೆಸ್ ಮುಖಂಡ ತೆನ್ನಿರಾ ಮಹಿನಾ ವಿರುದ್ಧ ಬಿಎನ್ಎಸ್ ಸೆಕ್ಷನ್ 108, 351(2), 352 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪೊನ್ನಣ್ಣ, ಮಂತರ್ ಹೆಸರು ಕೈಬಿಟ್ಟಿದ್ದಕ್ಕೆ ಆಕ್ರೋಶ: "ಸಹೋದರನ ಸಾವಿಗೆ ಕಾಂಗ್ರೆಸ್ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಂತರ್ ಗೌಡ ಕಾರಣರಾಗಿದ್ದಾರೆ. ಹೀಗಿದ್ದರೂ ಎಫ್ಐಆರ್ನಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ. ಪೊಲೀಸರು ಒತ್ತಡದಿಂದ ಹೆಸರನ್ನು ಎಫ್ಐಆರ್ನಲ್ಲಿ ನಮೂದಿಸಿಲ್ಲ ಎಂದು ವಿನಯ್ ಸಹೋದರ ಜೀವನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಿಖೆ ವರದಿ ಬರಲಿ: ಡಾ.ಜಿ.ಪರಮೇಶ್ವರ್
ವಿನಯ್ ಆತ್ಮಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಡಿಸಿಪಿ ತನಿಖೆ ಮಾಡುತ್ತಾರೆ. ತನಿಖೆಯ ಬಳಿಕ ವರದಿ ಬರಲಿದೆ. ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಸಾಮಾಜಿಕ ಮಾಧ್ಯಮದಲ್ಲಿ ಬಂದಿದ್ದೆಲ್ಲಾ ಸತ್ಯ ಇರಲ್ಲ. ಅದನ್ನು ಪರಿಶೀಲಿಸಬೇಕು. ಸತ್ಯ ಇದ್ದರೆ ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
"ನನಗೂ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆಗೂ ಸಂಬಂಧ ಇಲ್ಲ. ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಮಾಡಲು ಕೆಲಸವಿಲ್ಲ. ನನ್ನ ಬಗ್ಗೆ ಮಾತನಾಡಲು ಯಾವುದೇ ವಿಚಾರವಿಲ್ಲ. ಹಾಗಾಗಿ ಈ ವಿಚಾರಕ್ಕೆ ನನ್ನ ಹೆಸರು ಥಳಕು ಹಾಕಿದ್ದಾರೆ"
ಎ.ಎಸ್.ಪೊನ್ನಣ್ಣ