ಎಟಿಎಂ ದರೋಡೆ ಪ್ರಕರಣ ; ಶಾಸಕ ರಹೀಮ್ ಖಾನ್ ಪ್ರತಿಕ್ರಿಯೆ

Photo: x.com/rahimkhan
ಬೀದರ್ : ಎಟಿಎಂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಹೀಮ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಬೀದರ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಂಥ ಘಟನೆ ನಡೆದಿದೆ. ಈ ಘಟನೆ ನಾನು ಮತ್ತು ಉಸ್ತುವಾರಿ ಸಚಿವರು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ನಾನು ಎಸ್ಪಿ, ಗುಪ್ತಚರ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಜೊತೆಗೆ ಇದರ ಬಗ್ಗೆ ಮಾತನಾಡಿದ್ದೇನೆ ಎಂದು ಅವರು ತಿಳಿಸಿದರು.
ಗುಂಡಿನ ದಾಳಿಯಲ್ಲಿ ಗಿರಿವೆಂಕಟೇಶ್ ಮೃತಪಟ್ಟಿದ್ದು, ಶಿವಕುಮಾರ್ ಎಂಬ ಸಿಬ್ಬಂದಿ ಗಾಯಗೊಂಡಿದ್ದಾರೆ. ಇದು ತುಂಬಾ ನೋವಿನ ಸಂಗತಿಯಾಗಿದೆ. ಅವರ ಕುಟುಂಬದ ದುಃಖದಲ್ಲಿ ನಾವು ಕೂಡ ಭಾಗಿಯಾಗಿದ್ದೇವೆ. ಸರಕಾರದಿಂದ ಬರುವ ಪರಿಹಾರವನ್ನು ಆ ಕುಟುಂಬಸ್ಥರಿಗೆ ಒದಗಿಸಲಾಗುವುದು. ಇಂಥ ಘಟನೆಗಳಿಂದ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಹಾಗಾಗಿ ಆದಷ್ಟು ಬೇಗ ಆರೋಪಿಗಳಿಗೆ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದರು.
ನಾನು ಇಲ್ಲಿವರೆಗೆ ನಾಲ್ಕು ಬಾರಿ ಈ ಕ್ಷೇತ್ರದ ಎಂಎಲ್ ಎ ಆಗಿದ್ದೇನೆ. ಬೀದರ್ ನಲ್ಲಿ ಶಾಂತಿಯ ವಾತಾವರಣ ಇತ್ತು. ನನ್ನ ಪ್ರಯತ್ನ ಯಾವಾಗಲೂ ಅಭಿವೃದ್ಧಿ ಮಾಡುವ ಜೊತೆಗೆ ಶಾಂತಿ ಕಾಪಾಡುವುದಾಗಿದೆ. ಯಾವುದೇ ಹಬ್ಬಗಳಲ್ಲಿ ಅಥವಾ ಸಂಘಟನೆಯಿಂದ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಶಾಂತತೆ ಕಾಪಾಡಬೇಕು ಎಂದು ಪೊಲೀಸ್ ಇಲಾಖೆ ಜೊತೆಗೆ ಸಂಪರ್ಕ ಮಾಡಿ ತಿಳಿಸುತ್ತೇನೆ. ಯಾಕೆಂದರೆ ಬೀದರ್ ನಲ್ಲಿ ಪ್ರೀತಿ, ಪ್ರೇಮ ತುಂಬಾ ಮುಖ್ಯವಾಗಿದೆ ಎಂದರು.