ಕನ್ನಡ ಸಾಹಿತ್ಯ ಅನುವಾದಿಸುವ ಮೂಲಕ ಕನ್ನಡಕ್ಕೆ ಜಾಗತಿಕ ಮಹತ್ವ ತಂದುಕೊಡುವ ಅಗತ್ಯವಿದೆ: ಪ್ರೊ. ವಿಕ್ರಮ್ ವಿಸಾಜಿ

ಬೀದರ್: ಕನ್ನಡ ಸಾಹಿತ್ಯ ಅನುವಾದಿಸುವ ಮೂಲಕ ಕನ್ನಡದ ಜ್ಞಾನ ಪರಂಪರೆಗೆ ಜಾಗತಿಕ ಮಹತ್ವ ತಂದುಕೊಡುವ ಅಗತ್ಯವಿದೆ ಎಂದು ಕಲಬುರ್ಗಿಯ ಸಿಯುಕೆ ಪ್ರಾಧ್ಯಾಪಕ ಪ್ರೊ. ವಿಕ್ರಮ್ ವಿಸಾಜಿ ಹೇಳಿದರು.
ಬಸವಕಲ್ಯಾಣದ ಅಕ್ಕ ನಾಗಮ್ಮನವರ ಗವಿ ಮಂಟಪದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಬಸವಪೀಠದ ಸಹಯೋಗದೊಂದಿಗೆ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ವಚನಗಳ ಅನುಸಂಧಾನ ಹಾಗೂ ಅನುವಾದದ ಆಯಾಮ ಕುರಿತ ಪ್ರತಿಷ್ಠಾನದ 93ನೇ ಉಪನ್ಯಾಸ ಮತ್ತು ಸಂವಾದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿರು.
ಯೂರೋಪ್ ನಮಗೆ ಅರ್ಥವಾದಷ್ಟು ಯೂರೋಪಿಗೆ ನಾವು ಅರ್ಥವಾಗಿಲ್ಲ. ಎರಡು ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಾಗಲು ಅನುವಾದ ಬೇಕೇ ಬೇಕು ಎಂದರು.
ಜಗತ್ತಿನ ಎಲ್ಲ ಜನಾಂಗಗಳ ನಡುವೆ ಅರ್ಥಪೂರ್ಣವಾದ ತಿಳುವಳಿಕೆ ಸಾಧ್ಯವಾಗುತ್ತದೆ. ಗ್ರೀಕ್, ಮಧ್ಯಪ್ರಾಚ್ಯ, ಆಫ್ರಿಕನ್, ಯೂರೋಪಿಯನ್ ಸಾಹಿತ್ಯ ಅನುವಾದದ ಮೂಲಕ ಅರ್ಥ ಮಾಡಿಕೊಂಡಿದ್ದೇವೆ. ಈಗ ಭಾರತದ ಸಾಹಿತ್ಯ ಅದರಲ್ಲೂ ಕನ್ನಡದ ಸಾಹಿತ್ಯ ಜಗತ್ತಿನ ಬೇರೆ ಬೇರೆ ಭಾಷೆಗೆ ಹೋಗುವ ಅಗತ್ಯವಿದೆ. ಬಸವ ಸಮಿತಿ ಹಾಗೂ ಸಿಯುಕೆಯು ವಚನಗಳನ್ನು ಅನುವಾದಿಸುವ ಮೂಲಕ ಜಾಗತಿಕ ಸಾಹಿತ್ಯ ವಲಯಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಪ್ರೊ. ಗಣಪತಿ ಸಿನ್ನೂರ್ ಅವರು ಮಾತನಾಡಿ, ವಚನಗಳ ತಾತ್ವಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮ ಹೊರ ಜಗತ್ತಿಗೆ ಪರಿಚಯಿಸಲು ಅನುವಾದ ಒಂದು ದಾರಿಯಾಗಿದೆ. ಕಳೆದ ಎರಡುವರೆ ವರ್ಷದಿಂದ ಬಸವ ಸಮಿತಿ ಜೊತೆಗೆ ಕಲಬುರ್ಗಿಯ ಸಿಯುಕೆ, ಬೆಂಗಳೂರು ನಗರ ವಿವಿ, ಜರ್ಮನ್, ಸ್ಪಾನಿಷ್, ಜಾಪನಿಸ್ ಈ ಮೂರು ಭಾಷೆಗಳಲ್ಲಿ ವಚನ ಅನುವಾದದ ಕೆಲಸ ಮಾಡಿದೆ. ಈ ಮೂಲಕ ಕನ್ನಡ ಸಾಹಿತ್ಯದ ಮುಖ್ಯ ದರ್ಶನವನ್ನು ಜಗತ್ತಿಗೆ ಪರಿಚಯಿಸುವ ಅಳಿಲು ಸೇವೆ ಸಲ್ಲಿಸುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರೊ. ಭಾನುಮತಿ ವಿಜಯ್ ಕೃಷ್ಣನ್ ಮಾತನಾಡಿ, ವಚನಗಳು ಭಾರತೀಯ ಸಾಂಸ್ಕೃತಿಕ ಲೋಕದಲ್ಲಿ ಬಹುದೊಡ್ಡ ಸ್ಥಾನ ಪಡೆದಿವೆ. ಅವುಗಳ ಓದು ಒಂದು ತತ್ವಶಾಸ್ತ್ರೀಯ ಪಯಣವಿದ್ದಂತೆ. ವಚನ ಸ್ವಾತಂತ್ರ್ಯ ಮತ್ತು ಸಮಾನತೆಯ ಸಮಾಜದ ಪರಿಕಲ್ಪನೆ ರೂಪಿಸಿದ ದಾರ್ಶನಿಕ ಪಠ್ಯಗಳು. ಇವುಗಳ ಬಗೆಗೆ ಹೊರ ಜಗತ್ತಿಗೆ ಅರಿವಿನ ಅಗತ್ಯವಿದೆ. ಭಾಷಾಂತರಗೊಂಡ ವಚನಗಳು ಮುಂದೊಂದು ದಿನ ವಿದೇಶಗಳಲ್ಲಿ ಸಂಶೋಧನಾತ್ಮಕ ಆಯಾಮ ಪಡೆಯುತ್ತವೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ವಿವಿ ಪ್ರಾಧ್ಯಾಪಕಿ ಪ್ರೊ. ಸುಧಾ ಶ್ರೀಧರ್, ಸಿಯುಕೆ ಪ್ರಾಧ್ಯಾಪಕರಾದ ಡಾ. ಪಿ. ಕುಮಾರ್ ಮಂಗಲಮ್, ಪ್ರೊ. ಪಿಯಾಲಿ ರಾಯ್, ಶಿವಮ್ ಮಿಶ್ರಾ, ಬಸವ ಸಮಿತಿಯ ನವಿನ್, ಪ್ರತಿಷ್ಠಾನದ ಅಧ್ಯಕ್ಷ ಎಸ್. ಜಿ. ಹುಡೇದ್, ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಭೀಮಾಶಂಕರ್ ಬಿರಾದಾರ್, ಶರಣಪ್ಪ ಹಾಗೂ ಶಿವಾಜಿ ಮೇತ್ರೆ ಸೇರಿದಂತೆ ಇತರರು ಇದ್ದರು.