ಸಂತ ಸೇವಾಲಾಲ್ ಮಾಹಾರಾಜರು ಮೂಢನಂಬಿಕೆ ವಿರುದ್ಧ ಧ್ವನಿ ಎತ್ತಿದ ಮಹಾನ್ ಪುರುಷ : ಸಂಸದ ಸಾಗರ್ ಖಂಡ್ರೆ

ಬೀದರ್ : ಸಂತ ಸೇವಾಲಾಲ್ ಮಾಹಾರಾಜರು ಮೂಢನಂಬಿಕೆ ಹಾಗೂ ಕೆಟ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿದ ಮಹಾನ್ ಪುರುಷರಾಗಿದ್ದಾರೆ. ಅವರ ವಿಚಾರಧಾರೆಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಮುನ್ನಡೆಯಬೇಕು ಎಂದು ಲೋಕಸಭಾ ಸಂಸದ ಸಾಗರ್ ಖಂಡ್ರೆ ಹೇಳಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ನಡೆದ ʼ286ನೇ ಸಂತ ಸೇವಾಲಾಲ್ ಜಯಂತ್ಯೋತ್ಸವ ಕಾರ್ಯಕ್ರಮʼ ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಸೇವಾಲಾಲ್ ಮಹಾರಾಜರು ಮಹಾನ್ ಪವಾಡ ಪುರುಷರಾಗಿದ್ದರು. ಅವರು ಜನರ ಸಮಸ್ಯೆಗಳನ್ನು ಆಲಿಸಿಸುತ್ತಿದ್ದರು. ಮೂಡನಂಬಿಕೆ, ಕೆಟ್ಟ ಆಚರಣೆಗಳ ವಿರುದ್ಧ ಧ್ವನಿ ಎತ್ತಿ ಜನರಿಗೆ ತಿಳಿವಳಿಕೆ ಮೂಡಿಸಿದರು. ಸಮಾಜದ ಐಕ್ಯತೆ ಮತ್ತು ಸಹಬಾಳ್ವೆಗೆ ಅವರು ಪ್ರೇರೆಪಿಸಿದರು. ಬ್ರೀಟಿಷರು ತೆರಿಗೆ ಹೆಚ್ಚಳ ಮಾಡಿದಾಗ ವೀರ ಸೇನಾನಿಯಾಗಿ ಹೋರಾಡಿದರು. ಯಾವುದೇ ಮಹಾನ ಪುರುಷರು ಒಂದೆ ಜಾತಿಗೆ ಸಿಮಿತವಿಲ್ಲ. ಅವರು ಮಾನವ ಕುಲಕ್ಕೆ, ಸುಧಾರಣೆಗೆ ಪ್ರಯತ್ನಿಸಿದವರು ಎಂದು ತಿಳಿಸಿದರು.
ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಜಕುಮಾರ್ ಥಾವರಾ ಖೋಲಾ ಅವರು ಮಾತನಾಡಿ, ಸಂತ ಸೇವಾಲಾಲ್ ಅವರು ದಾವಣಗೆರೆ ಜಿಲ್ಲೆಯ ಸುರಗೊಂಡನ ಕೊಪ್ಪದಲ್ಲಿ 1739ರ ಫೆ.15 ರಂದು ಶಿರಿಸಿಯ ಮಾರಿಕಾಂಬಾ ದೇವಿಯ ಕೃಪಾದಿಂದ ಜನಿಸಿದರು. ಹೆಂಗಸರು, ಗಂಡಸರು ಭಾಯಿ(ಅಣ್ಣ) ಎನ್ನುವುದರಿಂದ ಅವರು ಬ್ರಹ್ಮಚಾರಿ ಜೀವನ ಕಳೆದರು. ಸಂತ ಪರಂಪರೆಯ ಕಡೆಗೆ ಒಲವು ಹೊಂದಿದ್ದ ಸೇವಾಲಾಲ ತನ್ನ ಪವಾಡಗಳಿಂದ ಸೇವಾ ಭಾಯಿ ಎಂದೇ ಪ್ರಸಿದ್ಧರಾದರು ಎಂದು ನುಡಿದರು.
ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಶ್ರೀ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಸೇವಲಾಲ್ ಮಾಹಾರಾಜರ ಭಾವಚಿತ್ರ ಮೆರವಣಿಗೆ ಪ್ರರಾಂಭಗೊಂಡು ಶಿವಾಜಿ ವೃತ್ತ, ಭಗತಸಿಂಗ್ ವೃತ್ತ, ಬಸವೇಶ್ವರ್ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಜನರಲ್ ಕರಿಯಪ್ಪ ವೃತ್ತದಿಂದ ರಂಗಮಂದಿರದವರೆಗೆ ಸಾಗಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಸಹಾಯಕ ಆಯುಕ್ತ ಮಹಮ್ಮದ್ ಶಕೀಲ್, ಬಂಜಾರ ಶಕ್ತಿ ಪೀಠ ಸೇವಾ ನಗರದ ಗುರು ರಾಮ ಚೈತನ್ಯ ಮಹಾರಾಜ್, ಬೀದರ್ ವಿಶ್ವವಿದ್ಯಾಲಯದ ಕುಲಸಚಿವ ಪರಮೇಶ್ವರ್ ನಾಯಕ್, ಸಮಾಜದ ಮುಖಂಡರಾದ ಗೋವರ್ಧನ್ ರಾಥೋಡ್, ಬಸವರಾಜ್ ಪವಾರ್, ರಮೇಶಕುಮಾರ್ ಜಾಧವ್, ಮಾಣಿಕರಾವ್ ಪವಾರ್ ಮತ್ತು ಅನೇಕರು ಉಪಸ್ಥಿತರಿದ್ದರು.