ಯತ್ನಾಳ್ ಜೋಕರ್ ಅಷ್ಟೇ ಅಲ್ಲ, ಮಾನಸಿಕ ರೋಗಿ : ಸಚಿವ ಈಶ್ವರ್ ಖಂಡ್ರೆ
“ಆರೆಸ್ಸೆಸ್ ಖುಷಿ ಪಡಿಸಲು ಬಸವಣ್ಣನವರ ಕುರಿತು ಅವಹೇಳನ”

ಬೀದರ್ : ಸಾಂಸ್ಕೃತಿಕ ನಾಯಕ ಅಂತಾ ಬಸವಣ್ಣನವರ ಕುರಿತು ಲಘು, ಹಗುರವಾದ ಹೇಳಿಕೆ ನೀಡಿದ್ದು ಖಂಡನೀಯ, ಯತ್ನಾಳ್ ಜೋಕರ್ ಅಷ್ಟೇ ಅಲ್ಲ, ಮಾನಸಿಕ ರೋಗಿ. ಅವರು ಮಾನಸಿಕ ವೈದ್ಯರ ಬಳಿ ಚಿಕಿತ್ಸೆ ಪಡಿಯೋದು ಸೂಕ್ತ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದರು.
ರವಿವಾರ ಬೀದರ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಸವಣ್ಣನವರು ಹೊಳಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೇಡಿ ಎಂಬ ಅರ್ಥದಲ್ಲಿ ಹೇಳಿರೋದು ನೀಚ ಕೆಲಸ. ಆರೆಸ್ಸೆಸ್ ಅನ್ನು ಖುಷಿ ಪಡಿಸಲು ಬಸವಣ್ಣನವರ ಕುರಿತು ಯತ್ನಾಳ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.
ʼಯತ್ನಾಳ್ ಅವರಿಗೆ ವಿನಾಶಕಾಲ ವಿಪರೀತ ಬುದ್ಧಿʼ ಬಂದಿರುವುದರಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದರ ಫಲ ಬಸವ ಭಕ್ತರು ಕೊಡುತ್ತಾರೆ. ವೈಯಕ್ತಿಕ ಸ್ವಾರ್ಥ, ಪಕ್ಷದ ಆಂತರಿಕ ಕಲಹಗಳ ಸ್ವಾರ್ಥಕ್ಕಾಗಿ ಪ್ರತಿಭಟನೆ ಮಾಡ್ತ ಇರೋವುದು ಎಲ್ಲಾ ನಾಟಕ. ಬಸವಣ್ಣನವರ ಮತ ಕೇಳುವ ಬಿಜೆಪಿಯವರು ʼಮೌನಂ ಸಮ್ಮತಿ ಲಕ್ಷಣಂʼ ಎಂಬಂತೆ ಸುಮ್ಮನೆ ಕೂತಿದ್ದಾರೆ. ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರೂ ಮಾತನಾಡುತ್ತಿಲ್ಲ, ಬಸವಭಕ್ತರಿಗೆ ನೋವಾಗಿದ್ದು, ಬಿಜೆಪಿ ಅವರು ಇದಕ್ಕೆ ಉತ್ತರ ಕೊಡ್ಬೇಕು ಎಂದು ಒತ್ತಾಯಿಸಿದ್ದಾರೆ.
ಬಸವಣ್ಣನವರ ಬಗ್ಗೆ ಅವಹೇಳನ ಮಾಡಿದರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಬಸವಣ್ಣನವರ ಅವಮಾನ ಮಾಡೋಕೆ ಯತ್ನಾಳ್ ಅವರನ್ನ ಛೂ ಬಿಟ್ಟಿದ್ದಾರೆ. ಈ ಬಗ್ಗೆ ಸಿಎಂ ಸಿದ್ರಾಮಯ್ಯನವರ ಜೊತೆಗೆ ಮಾತನಾಡಿ, ಕೇಸ್ ದಾಖಲಿಸಿ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.