ಗುಂಡ್ಲುಪೇಟೆ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ನಾಲ್ಕು ಬೈಕ್, ಒಂದು ಕಾರು ಭಸ್ಮ

ಚಾಮರಾಜನಗರ: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ನಾಲ್ಕು ಬೈಕ್ ಮತ್ತು ಒಂದು ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಸಿದ್ದರಾಜಚಾರಿ ಎಂಬುವವರಿಗೆ ಸೇರಿದ ಎರಡು ಬೈಕ್ ಒಂದು ಕಾರು ಹಾಗೂ ಪಕ್ಕದ ಮನೆಯವರ ಎರಡು ಬೈಕ್ ಗಳನ್ನು ಶೆಡ್ ನಲ್ಲಿ ರಾತ್ರಿ ನಿಲ್ಲಿಸಲಾಗಿತ್ತು. ಕಳೆದ ರಾತ್ರಿ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಈ ವಾಹನಗಳಿಗೆ ಬೆಂಕಿ ಹಚ್ಚಿದ್ದರೆನ್ನಲಾಗಿದೆ.
ವಿಷಯ ತಿಳಿದು ಮನೆಮಂದಿ ಮಲಗಿದ್ದವರು ಎದ್ದು ಬೆಂಕಿ ನಂದಿಸುವ ಹೊತ್ತಿಗೆ ವಾಹನಗಳು ಸುಟ್ಟು ಹೋಗಿವೆ. ಜೊತೆಗೆ ಶೆಡ್ ಕೂಡ ಬೆಂಕಿಗಾಹುತಿಯಾಗಿದೆ. ಇದರಿಂದ ಮಾಲಕರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ: ಕಾರು ಮತ್ತು ಬೈಕ್ ಗಳಿಗೆ ಯಾರೋ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ. ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ವಾಹನದ ಮಾಲಕರು ಒತ್ತಾಯಿಸಿದ್ದಾರೆ.