ಚಿಕ್ಕಮಗಳೂರು | ಆನೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು; ಬೆಂಕಿ ನಂದಿಸಲು ಹರಸಾಹಸ

ಚಿಕ್ಕಮಗಳೂರು : ಜಿಲ್ಲೆಯ ಕಳಸ ತಾಲೂಕು ಆನೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ನೂರಾರು ಎಕರೆ ಪ್ರದೇಶ ಕಾಡ್ಗಿಚ್ಚಿನಿಂದ ಸುಟ್ಟು ಕರಕಲಾಗಿದೆ. ಕಾಡ್ಗಿಚ್ಚಿನ ದೃಶ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುಡ್ಡದ ತುದಿಯಲ್ಲಿ ಬೆಂಕಿ ಹತ್ತಿಕೊಂಡಿದ್ದು ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ.
ಆನೆಗುಡ್ಡ ಪ್ರದೇಶದಲ್ಲಿನ ಒಂದು ಭಾಗ ಹಚ್ಚಹಸಿರಿನಿಂದ ಕೂಡಿದ್ದು, ಮತ್ತೊಂದು ಭಾಗದಲ್ಲಿನ ಹುಲ್ಲು ಸಂಪೂರ್ಣ ಒಣಗಿ ನಿಂತಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಈ ಜಾಗಕ್ಕೆ ಹೋಗಲು ಸಾಧ್ಯವಿಲ್ಲವಾಗಿದ್ದು, ಬೆಂಕಿ ಹೇಗೆ ಹತ್ತಿಕೊಂಡಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಸಿಲ ಝಳದಿಂದ ಬೆಂಕಿ ಹತ್ತಿಕೊಂಡಿರಬಹುದೆಂದು ಹೇಳಲಾಗುತ್ತಿದೆ.
ಒಣಗಿ ನಿಂತಿರುವ ಮರಗಳು ಬಾರೀ ಪ್ರಮಾಣದಲ್ಲಿ ಬೀಸುವ ಗಾಳಿಗೆ ಮರ ಒಂದಕ್ಕೊಂದು ಉಜ್ಜಿಕೊಂಡು ಬೆಂಕಿ ಹತ್ತಿರಬಹುದೆಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಚಾರ್ಮಾಡಿಘಾಟಿ ಪ್ರದೇಶದಲ್ಲಿನ ಅಣ್ಣಪ್ಪ ಸ್ವಾಮಿ ದೇವಸ್ಥಾನದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ನೂರಾರು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಅದೇ ರೀತಿ ಮೂಡಿಗೆರೆ ತಾಲೂಕು ಬಿದಿರುತಳ ಪ್ರದೇಶದಲ್ಲಿ ಕಾಡಿಗೆ ಬೆಂಕಿ ಬಿದ್ದು ನೂರಾರು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಚಾರ್ಮಾಡಿಘಾಟಿ ಹಾಗೂ ಬಿದಿರುತಳ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದೆಂದು ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಕಾರ್ಯದಲ್ಲಿ ತೊಡಗಿದ್ದಾರೆ.