ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ದುರದೃಷ್ಟಕರ : ಸಿ.ಟಿ.ರವಿ
"ಯತ್ನಾಳ್ ಕೂಡ ಓರ್ವ ಬಲಿಷ್ಠ ನಾಯಕ ಅದರ ಬಗ್ಗೆ ಅನುಮಾನ ಬೇಡ"

ಸಿ.ಟಿ.ರವಿ
ಚಿಕ್ಕಮಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ನನ್ನ ಒಡನಾಟ ನಾಲ್ಕು ದಶಕಗಳದ್ದು, ಅವರನ್ನು ಪಕ್ಷದಿಂದ ಆರು ವರ್ಷ ಉಚ್ಛಾಟನೆ ಮಾಡಿರುವುದು ದುರದೃಷ್ಟಕರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಸಾಮರ್ಥ್ಯ ಮತ್ತು ದೌರ್ಬಲ್ಯ ಇದ್ದೇ ಇರುತ್ತದೆ. ಅದನ್ನು ನಾನು ವಿಶ್ಲೇಷಣೆ ಮಾಡುವುದಿಲ್ಲ. ಯತ್ನಾಳ್ ಕೂಡ ಓರ್ವ ಬಲಿಷ್ಠ ನಾಯಕ ಅದರ ಬಗ್ಗೆ ಅನುಮಾನ ಬೇಡ. ಪಕ್ಷ ಹಲವು ಕಾರಣಗಳಿಂದ ಅನಿವಾರ್ಯ ನಿರ್ಧಾರಕ್ಕೆ ಬರುತ್ತದೆ. ಎಲ್ಲರೂ ಒಟ್ಟಿಗೆ ಹೋಗುವ ವಾತಾವರಣ ನಿರ್ಮಾಣವಾದರೇ ಖುಷಿ ಪಡುವುವವರಲ್ಲಿ ನಾನೇ ಮೊದಲಿಗನಾಗುತ್ತೇನೆ ಎಂದರು.
ಯತ್ನಾಳ್ ಬಿಜೆಪಿ ಬಗ್ಗೆ ಮಾತನಾಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಈಗ ಮಾತನಾಡಿದರೇ ಅವರವರ ಭಾವಕ್ಕೆ ಗ್ರಹಿಸುತ್ತಾರೆ. ಸತ್ಯ ಹೇಳಿದರೆ ಗ್ರಹಿಸುವವರು ಸತ್ಯವನ್ನೇ ಗ್ರಹಿಸುತ್ತಾರೆಂದು ಇಲ್ಲ. ಸಂದರ್ಭದಕ್ಕೆ ತಕ್ಕಂತೆ ತಮಗೆ ಬೇಕಾದಂತೆ ಗ್ರಹಿಸುತ್ತಾರೆ. ನಿಷ್ಠೆ ಮಾತು ಬಂದಾಗ ಪಕ್ಷಕ್ಕಿಂತ ನಾವೂ ಯಾವುದನ್ನೂ ಭಾವಿಸುವುದಿಲ್ಲ. ಅದಕ್ಕಿಂತ ದೊಡ್ಡದಿದ್ದರೇ ಅದು ದೇಶ ಮಾತ್ರ ಎಂದು ಹೇಳಿದರು.