ಚಿಕ್ಕಮಗಳೂರು | 13 ವರ್ಷಗಳ ಬಳಿಕ ರೈತನಿಗೆ ಬಂತು 3.20ಲಕ್ಷ ರೂ. ವಿದ್ಯುತ್ ಬಿಲ್

ಚಿಕ್ಕಮಗಳೂರು : ಜಿಲ್ಲೆಯ ರೈತರೊಬ್ಬರಿಗೆ ಕಳೆದ 13 ವರ್ಷಗಳ ಬಳಿಕ ಬರೋಬ್ಬರಿ ಮೂರು ಲಕ್ಷ ಇಪ್ಪತ್ತು ಸಾವಿರ ರೂ. ವಿದ್ಯುತ್ ಬಿಲ್ ಬಂದಿದ್ದು, ಇಲಾಖೆಯ ವಿರುದ್ಧ ರೈತ ಆಕ್ರೋಶ ಹೊರ ಹಾಕಿದ್ದಾರೆ.
ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ತಾಲೂಕಿನ ಆಲ್ದೂರು ಸಮೀಪದ ವಿಕ್ಕರಣೆ ಗ್ರಾಣದ ರೈತ ಉಮೇಶ್ ಎಂಬುವರಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬಾರೀ ಮೊತ್ತದ ಬಿಲ್ ನೀಡಲಾಗಿದೆ.
ರೈತ ಉಮೇಶ್ ಜಮೀನಿನಲ್ಲಿ ಅಡಿಕೆ, ಕಾಫಿ ಬೆಳೆಗಳನ್ನು ಬೆಳೆಯುತ್ತಿದ್ದು ನೀರು ಹಾಯಿಸಲು 10 ಎಚ್.ಪಿ. ಪಂಪ್ಸೆಟ್ ಆಳವಡಿಸಿ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಕಾಲದಿಂದಲೂ 10 ಎಚ್.ಪಿ.ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಈಗ ಏಕೆ ವಿದ್ಯುತ್ ಬಿಲ್ ಕಟ್ಟಿ ಎಂದು ನೋಟಿಸ್ ಕಳಿಸಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೇ ಅಧಿಕಾರಿಗಳು ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಇಲ್ಲವೆಂದು ಉತ್ತರಿಸುತ್ತಾರೆಂದು ತಿಳಿಸಿದ್ದಾರೆ.
13 ವರ್ಷಗಳ ಬಳಿಕ ಮೂರು ಲಕ್ಷ ಇಪ್ಪತ್ತು ಸಾವಿರ ರೂ. ವಿದ್ಯುತ್ ಬಿಲ್ಲನ್ನು 15ದಿನಗಳಲ್ಲಿ ಪಾವತಿ ಮಾಡುವಂತೆ ನೋಟಿಸ್ ನೀಡಿದ್ದು, ಹಣ ಪಾವತಿಸದಿದ್ದರೇ ವಿದ್ಯುತ್ ಸಂಪರ್ಕ ಕಟ್ ಮಾಡುತ್ತೇವೆಂದು ತಿಳಿಸಿದ್ದಾರೆ. ಅಧಿಕಾರಿಗಳ ಈ ನಡೆಗೆ ರೈತ ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.