ಚಿಕ್ಕಮಗಳೂರು | ಶರಣಾಗತ ನಕ್ಸಲರೊಂದಿಗೆ ಸ್ಥಳ ಮಹಜರು ನಡೆಸಿದ ಪೊಲೀಸರು
![ಚಿಕ್ಕಮಗಳೂರು | ಶರಣಾಗತ ನಕ್ಸಲರೊಂದಿಗೆ ಸ್ಥಳ ಮಹಜರು ನಡೆಸಿದ ಪೊಲೀಸರು ಚಿಕ್ಕಮಗಳೂರು | ಶರಣಾಗತ ನಕ್ಸಲರೊಂದಿಗೆ ಸ್ಥಳ ಮಹಜರು ನಡೆಸಿದ ಪೊಲೀಸರು](https://www.varthabharati.in/h-upload/2025/01/19/1316476-035ab71a-f80d-42ad-a700-ef81549de136-1.webp)
ಚಿಕ್ಕಮಗಳೂರು : ಶಸ್ತ್ರಗಳನ್ನು ತ್ಯಜಿಸಿ ಸರಕಾರದ ಮುಂದೆ ಶರಣಾಗತರಾಗಿರುವ 6 ಮಂದಿ ನಕ್ಸಲರ ಪೈಕಿ ನಾಲ್ಕು ಮಂದಿ ನಕ್ಸಲರೊಂದಿಗೆ ರವಿವಾರ ಮಲೆನಾಡು ಭಾಗದ ಕೆಲ ಪ್ರದೇಶಗಳಲ್ಲಿ ಪೊಲೀಸರು ಸ್ಥಳ ಮಹಜರು ನಡೆಸುವ ಮೂಲಕ ಪ್ರಕರಣಗಳ ವಿಚಾರಣೆ ಪ್ರಕ್ರಿಯೆ ಆರಂಭಿಸಲಾಗಿದೆ.
ಹೊರ ಜಿಲ್ಲೆಯ ಇಬ್ಬರು ನಲ್ಸಕರನ್ನು ಹೊರತುಪಡಿಸಿ ಮುಂಡಗಾರು ಲತಾ ಸೇರಿದಂತೆ ನಾಲ್ಕು ಜನ ಶರಣಾಗತ ನಕ್ಸಲರನ್ನು ಬೀಗಿ ಪೊಲೀಸ್ ಬಂದೋಬಸ್ತ್ನಲ್ಲಿ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಡೆಗುಂದಿ ಗ್ರಾಮಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
2024 ನ.10ರಂದು ಕಡೆಗುಂದಿ ಗ್ರಾಮದ ಸುಬ್ಬಗೌಡ ಅವರ ಮನೆಯಲ್ಲಿ ನಕ್ಸಲರು ಕರಪತ್ರ ಹಾಕಿರುವ ಪ್ರಕರಣದ ವಿಚಾರಣೆ ರವಿವಾರ ನಡೆದಿದೆ ಎನ್ನಲಾಗಿದ್ದು, ವಿಚಾರಣೆಯನ್ನು ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ನಡೆಸಲಾಗಿದೆ. ವಿಚಾರಣೆ ಬಳಿಕ ನಕ್ಸಲರನ್ನು ಮತ್ತೆ ಚಿಕ್ಕಮಗಳೂರು ನಗರಕ್ಕೆ ಕರೆತರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸ್ಥಳ ಮಹಜರು ನಡೆಸುವ ಸಂಬಂಧ ಚಿಕ್ಕಮಗಳೂರು ಜಿಲ್ಲೆಗೆ ಆರು ಜನ ಶರಣಾಗತ ನಕ್ಸಲರನ್ನು ಕರೆ ತಂದಿದ್ದು, ಶನಿವಾರ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ್ದು, ರವಿವಾರ ನಾಲ್ಕು ಜನ ನಕ್ಸಲರನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು.