ಶೃಂಗೇರಿ | ಬಜರಂಗ ದಳದಿಂದ ಗೂಂಡಾಗಿರಿ: ದರ್ಗಾಕ್ಕೆ ಬಂದಿದ್ದವರ ಕಾರು ಅಡ್ಡಗಟ್ಟಿ ಹಲ್ಲೆ
ರಸ್ತೆ ಅಪಘಾತ ಸಂಭವಿಸಿದ ವಿಚಾರವಾಗಿ ತಗಾದೆ ತೆಗೆದು ಕೃತ್ಯ

ಚಿಕ್ಕಮಗಳೂರು: ರಸ್ತೆ ಅಪಘಾತವನ್ನೇ ನೆಪವಾಗಿಟ್ಟುಕೊಂಡು ದರ್ಗಾಕ್ಕೆ ಆಗಮಿಸುತ್ತಿದ್ದವರ ಕಾರನ್ನು ಅಡ್ಡಗಟ್ಟಿ ಬಜರಂಗ ದಳದ ಕಾರ್ಯಕರ್ತರೆನ್ನಲಾದ ತಂಡವೊಂದು ಹಲ್ಲೆ ನಡೆಸಿದ ಘಟನೆ ಶೃಂಗೇರಿಯಲ್ಲಿ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಹಲ್ಲೆಯಿಂದ ಗಾಯಗೊಂಡವರನ್ನು ಶೃಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪ ಮೂಲದ ಕುಟುಂಬವೊಂದು ಕಳೆದ ರಾತ್ರಿ ಮೂರು ಕಾರುಗಳಲ್ಲಿ ಶೃಂಗೇರಿ ಪಟ್ಟಣದಲ್ಲಿನ ದರ್ಗಾಕ್ಕೆ ಭೇಟಿ ನೀಡುವ ಉದ್ದೇಶದಿಂದ ಆಗಮಿಸಿದ್ದರು. ಈ ವೇಳೆ ಹರಿಹರಪುರದಲ್ಲಿ ಇವರಿದ್ದ ಕಾರು ಮತ್ತು ಬೈಕೊಂದರ ಮಧ್ಯೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಬಜರಂಗದಳದ ಕಾರ್ಯಕರ್ತರೆನ್ನಲಾದ ತಂಡವು ಶೃಂಗೇರಿ ಬಸ್ ನಿಲ್ದಾಣದ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಐವರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡವರು ಶೃಂಗೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣ ದಾಖಲು
ಈ ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಬೈಕ್-ಕಾರು ಅಪಘಾತ ಪ್ರಕರಣ ಹಾಗೂ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ತಿಳಿಸಿದ್ದಾರೆ.