ಸೌಹಾರ್ದ ಸಭೆಗಳು ಹೃದಯಗಳನ್ನು ಬೆಸೆಯುವ ಕೆಲಸ ಮಾಡುತ್ತವೆ : ಸುಧೀರ್ ಕುಮಾರ್ ಮುರೊಳ್ಳಿ
ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ʼಈದ್ ಸೌಹಾರ್ದ ಕೂಟʼ

ತರಿಕೇರೆ: ಸೌಹಾರ್ದ ಸಭೆಗಳು ಹೃದಯಗಳನ್ನು ಬೆಸೆಯುವ ಕೆಲಸ ಮಾಡುತ್ತವೆ ಎಂದು ಎಂದು ಎಪಿಸಿಆರ್ ರಾಜ್ಯಾಧ್ಯಕ್ಷರಾದ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಇತ್ತೀಚಿಗೆ ಜಮಾಅತೆ ಇಸ್ಲಾಮೀ ಹಿಂದ್ ತರೀಕೆರೆ ಘಟಕದ ವತಿಯಿಂದ ಪಟ್ಟಣದ ಹೋಟೆಲ್ ಅರಮನೆಯಲ್ಲಿ ಆಯೋಜಿಸಿದ್ದ ಈದ್ ಸೌಹಾರ್ದ ಕೂಟ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ʼನಮ್ಮಲ್ಲಿ ಕೆಲವು ಸಭೆಗಳು ಸಮಾಜವನ್ನು ಒಡೆಯುವ ಕೆಲಸ ಮಾಡಿದರೆ, ಮತ್ತೊಂದೆಡೆ ಸೌಹಾರ್ದ ಸಭೆಗಳು ಹೃದಯಗಳನ್ನು ಬೆಸೆಯುವ ಕೆಲಸ ಮಾಡುತ್ತವೆ. ಆದ್ದರಿಂದ ರಾಜ್ಯಾದ್ಯಂತ ಮನುಷ್ಯರನ್ನು ಜೋಡಿಸುವ ಸಮಾರಂಭಗಳು ಜರುಗಬೇಕುʼ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ, ಅಸೂಯೆ ಮತ್ಸರದಿಂದ ಕೇವಲ ವ್ಯಕ್ತಿ ಮಾತ್ರವಲ್ಲ, ಇಡೀ ಸಮಾಜ ನಾಶವಾಗುತ್ತದೆ. ಆದ್ದರಿಂದ ಇಲ್ಲಿ ಎಲ್ಲರೂ ಎಲ್ಲರನ್ನು ಗೌರವಿಸುವ ಹಾಗೂ ಪ್ರೀತಿಸುವ ವಾತಾವರಣ ಬೆಳೆಯಲಿ" ಎಂದು ಹೇಳಿದರು.
ಅನುಪಮ ಮಹಿಳಾ ಮಾಸಿಕ ಪತ್ರಿಕೆಯ ಉಪಸಂಪಾದಕರಾದ ಸಬೀಹಾ ಫಾತಿಮಾ ಮಾತನಾಡಿ, ರಮಝಾನ್ ಬಳಿಕ ಆಚರಿಸಲಾಗುತ್ತಿರುವ ಈದ್ ಸೌಹಾರ್ದ ಕೂಟ ನಮ್ಮೆಲ್ಲರನ್ನು ಪರಸ್ಪರ ಬೆರೆಯುವಂತೆ ಮಾಡಿದೆ. ಕೂಡಿ ಬಾಳಿದರೆ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ ಅಕ್ಕ, ಸಂಘಟನೆಯ ಜಿಲ್ಲಾ ಸಂಚಾಲಕ ರಿಝ್ವಾನ್ ಖಾಲಿದ್, ಶೇಖ್ ಜಾವೀದ್ ಸೇರಿ ಹಲವರು ಉಪಸ್ಥಿತರಿದ್ದರು.
ಆದಿಲ್ ಪಾಶಾ ಕಾರ್ಯಕ್ರಮವನ್ನು ನಿರೂಪಿಸಿದರು.