ಫೆ.14ರಂದು ಯಕ್ಷಗಾನ ಕಲಾರಂಗದ 50ನೇ ಮನೆ ಹಸ್ತಾಂತರ
ಉಡುಪಿ, ಫೆ.13:ದಾನಿಗಳ ಮೂಲಕ ವಿದ್ಯಾಪೋಷಕ್ನ ಅತ್ಯಂತ ಬಡ ವಿದ್ಯಾರ್ಥಿಗಳಿಗೆ ಉಡುಪಿಯ ಯಕ್ಷಗಾನ ಕಲಾ ರಂಗ ಸುಮಾರು 7ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಡುತ್ತಿರುವ 50ನೇ ಮನೆಯನ್ನು ಫೆ.14ರಂದು ಕಾರ್ಕಳ ತಾಲೂಕಿನ ನೂರಾಲ್ಬೆಟ್ಟಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಚೈತ್ರಾ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಗಂಗಾಧರ ರಾವ್, 2012ರಲ್ಲಿ ಸಣ್ಣ ಮಟ್ಟದಲ್ಲಿ ಪ್ರಾರಂಭ ಗೊಂಡ ಈ ಯೋಜನೆ ಇದೀಗ ವಿದ್ಯಾಪೋಷಕ್ ಮೂಲಕ ವಿದ್ಯಾಭ್ಯಾಸ ಮುಂದುವರಿಸಲು ಧನ ಸಹಾಯ ಪಡೆಯುತ್ತಿ ರುವ ಅತ್ಯಂತ ಬಡಕುಟುಂಬಕ್ಕೆ ತಲೆಯ ಮೇಲೊಂದು ಸೂರು ಕೊಡುವ ಉಪಯುಕ್ತ ಯೋಜನೆಯಾಗಿದೆ ಎಂದರು.
ಯಕ್ಷಗಾನ ಕಲಾರಂಗ ಇದುವರೆಗೆ ವಿವಿಧ ದಾನಿಗಳ ಮೂಲಕ 32 ಮಂದಿ ವಿದ್ಯಾರ್ಥಿನಿಯರ ಕುಟುಂಬಕ್ಕೆ, 12 ಮಂದಿ ವಿದ್ಯಾರ್ಥಿಗಳ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟಿದೆಯಲ್ಲದೇ, ಆರು ಮಂದಿ ಬಡ ಯಕ್ಷಗಾನ ಕಲಾವಿದರಿಗೂ ಮನೆಯನ್ನು ನಿರ್ಮಿಸಿಕೊಟ್ಟಿದೆ ಎಂದು ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದರು.
ಕಳೆದ ವಾರವಷ್ಟೇ (ಫೆ.6) ಹಾಲಾಡಿಯ ಬೆಳಾರಮಕ್ಕಿಯಲ್ಲಿ ಸಾತ್ವಿಕ್ ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿ ಕುಟುಂಬಕ್ಕೆ ಉಡುಪಿಯ ಯು.ಎಸ್. ನಾಯಕ್ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಮೂಲಕ ಮನೆ ನಿರ್ಮಿಸಿ ಹಸ್ತಾಂತರಿಸಿತ್ತು ಎಂದು ಮುರಲಿ ಕಡೆಕಾರ್ ವಿವರಿಸಿದರು.
ಇದೀಗ ಉಡುಪಿಯ ನಿವೃತ್ತ ಶಿಕ್ಷಕ ಯು.ಎಸ್.ರಾಜಗೋಪಾಲ್ ಆಚಾರ್ಯ ದಂಪತಿ ತಮ್ಮ ವಿವಾಹದ ಸುವರ್ಣ ವರ್ಷಾ ಚರಣೆಯ ನೆನಪಿನಲ್ಲಿ ತೀರಾ ಗ್ರಾಮೀಣ ಪ್ರದೇಶವಾದ ಬಜಗೋಳಿ ಸಮೀಪ ನೂರಾಲ್ಬೆಟ್ಟಿನಲ್ಲಿ ಅಶೋಕ ಮೂಲ್ಯ ಹಾಗೂ ವನಿತಾ ಮೂಲ್ಯ ದಂಪತಿಗಳ ಪ್ರತಿಭಾನ್ವಿತ ಪುತ್ರಿ ಚೈತ್ರಾ ಅವರಿಗಾಗಿ ಮನೆಯನ್ನು ನಿರ್ಮಿಸಿದ್ದು ನಾಳೆ ಅದನ್ನು ಉದ್ಘಾಟಿಸಿ ಕುಟುಂಬಕ್ಕೆ ಹಸ್ತಾಂತ ರಿಸಲಿದೆ ಎಂದು ಅವರು ತಿಳಿಸಿದರು.
ಪೇಜಾವರ ಸ್ವಾಮೀಜಿ ಅವರೂ ಈವರೆಗೆ ನಾಲ್ಕು ಮನೆಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ್ದಾರೆ ಎಂದ ಮುರಲಿ ಕಡೆಕಾರ್, ದಾನಿಗಳ ಮೂಲಕ ಬೈಂದೂರು ತಾಲೂಕಿನ ಹೆಮ್ಮಾಡಿ, ಗೊಳಿಹೊಳೆ, ಬ್ರಹ್ಮಾವರದ ಚೇರ್ಕಾಡಿ, ಉಡುಪಿಯ ನಿಂಜೂರುಬೆಟ್ಟು, ಕುಂದಾಪುರದ ಬಿದ್ಕಲ್ಕಟ್ಟೆಗಳಲ್ಲಿ ನಿರ್ಮಾಣ ಗೊಳ್ಳುತ್ತಿರುವ ಮನೆಗಳ ಕಾಮಗಾರಿ ಅಂತಿಮ ಹಂತ ದಲ್ಲಿದೆ. ಇನ್ನೂ 10 ಮನೆಗಳ ನಿರ್ಮಾಣಕ್ಕೆ ಬೇಡಿಕೆ ಬಂದಿದೆ ಎಂದರು.
ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥರು ನಾಳೆ ಸಂಜೆ 5:30ಕ್ಕೆ ನೂರಾಲ್ಬೆಟ್ಟಿನ ಮನೆಯನ್ನು ಉದ್ಘಾಟಿಸ ಲಿದ್ದಾರೆ. ದಾನಿ ಯು.ಎಸ್.ರಾಜಗೋಪಾಲ ಆಚಾರ್ಯ ಮತ್ತು ಸುಶೀಲಾ ಆರ್.ಆಚಾರ್ಯ ದಂಪತಿ ಉಪಸ್ಥಿತರಿರುವರು ಎಂದೂ ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ.ಭಟ್, ನಾರಾಯಣ ಎಂ.ಹೆಗಡೆ, ವಿ.ಜಿ.ಶೆಟ್ಟಿ, ಖಜಾಂಚಿ ಪ್ರೊ.ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು.