ಸೆ.25ರಂದು ಮಂಗಳೂರು ವಿವಿ ಸಂಸ್ಥಾಪನಾ ದಿನ
ಮಂಗಳೂರು, ಸೆ.23: ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನವನ್ನು ಸೆ.25ರಂದು ಪುರ್ವಾಹ್ನ 11 ಗಂಟೆಗೆ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಆಚರಿಸಲಾಗುವುದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ., ಉಡುಪಿ ಹಾಗೂ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಇತರರಿಗೆ ಉನ್ನತ ಶಿಕ್ಷಣ ನೀಡುವ ಸಲುವಾಗಿ 1980ರ ಸೆ.10ರಂದು ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಗೊಂಡಿದ್ದು, 45ನೇ ಸಂಸ್ಥಾಪನಾ ದಿನ ಇದಾಗಿದೆ ಎಂದರು.
ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾಯಾಧೀಶ ಎನ್. ಸಂತೋಷ್ ಹೆಗ್ಡೆ ಸಂಸ್ಥಾಪನಾ ಉಪನ್ಯಾಸ ನೀಡಲಿದ್ದಾರೆ. ಈ ಹಿಂದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಹಾಗೂ ಮಹನೀಯರಲ್ಲಿ ಗಿರೀಶ್ ಕಾರ್ನಾಡ್, ಡಾ.ರಾಜಾರಾಮಣ್ಣ, ಡಾ. ಡಿ. ವೀರೇಂದ್ರ ಹೆಗ್ಗಡೆ ಮೊದಲಾದವರು ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಪ್ರೊ. ದೇವೇಂದ್ರಪ್ಪ,ಕಾರ್ಯಕ್ರಮ ಸಂಯೋಜಕರಾದ ಪ್ರೊ.ಎ.ಎಂ.ಖಾನ್, ಸಂಗಪ್ಪ, ಪ್ರೊ.ಪುಟ್ಟಣ್ಣ ಉಪಸ್ಥಿತರಿದ್ದರು.