ಎಪ್ರಿಲ್ 24 ರಿಂದ ಮೇ 18 ವರೆಗೆ ಉಳ್ಳಾಲ ಉರೂಸ್

ಮಂಗಳೂರು: ದಕ್ಷಿಣ ಭಾರತದ ಅಜ್ಮೀರ್ ಎಂದು ಹೆಸರುವಾಸಿಯಾಗಿರುವ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಇದರ 22 ನೇ ಪಂಚವಾರ್ಷಿಕ 432 ನೇ ವಾರ್ಷಿಕ ಉರೂಸ್ ಸಮಾರಂಭವು ಖಾಝಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಎಪ್ರಿಲ್ 24 ರಿಂದ ಮೇ 18 ವರೆಗೆ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ರಿಲ್ 24 ರಂದು ಅಸರ್ ನಮಾಝ್ ಬಳಿಕ ವಾರ್ಷಿಕ ದ್ಸಿಕ್ರ್ ಮಜ್ಲಿಸ್ ಹಾಗೂ ಉರೂಸ್ ಉದ್ಘಾಟನೆ ನಡೆಯಲಿದೆ. ಅದೇ ದಿನ ದರ್ಗಾ ಝಿಯಾರತ್ ನೇತೃತ್ವವನ್ನು ಸಯ್ಯಿದ್ ಆಟ್ಟಕೋಯ ತಂಙಳ್ ವಹಿಸಲಿದ್ದಾರೆ.
ಉಳ್ಳಾಲ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮವನ್ನು ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ದುಆ ನೆರವೇರಿಸಲಿದ್ದಾರೆ. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಯ್ಯಿದ್ ಅಲಿ ಬಾಫಕಿ ತಂಙಳ್, ಇಬ್ರಾಹಿಂ ಖಲೀಲ್ ತಂಙಳ್ ಕಡಲುಂಡಿ, ಉಡುಪಿ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಶರೀಅತ್ ಕಾಲೇಜು ಪ್ರಾಂಶುಪಾಲ ಪ್ರೊ.ಅಹ್ಮದ್ ಕುಟ್ಟಿ ಸಖಾಫಿ, ಅತ್ತಾವುಲ್ಲ ತಂಙಳ್ ಉದ್ಯಾವರ, ಸ್ಪೀಕರ್ ಯುಟಿ ಖಾದರ್, ವಸತಿ ಸಚಿವ ಝಮೀರ್ ಅಹಮ್ಮದ್, ಯೆನೆಪೋಯ ಅಬ್ದುಲ್ಲಾ ಕುಂಞಿ ಹಾಜಿ, ಬಿ.ಎಂ.ಫಾರೂಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಎಪ್ರಿಲ್ 25 ರಿಂದ ಮೇ 14ವರೆಗೆ ಪ್ರಮುಖ ಧಾರ್ಮಿಕ ಮುಖಂಡರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಧಾರ್ಮಿಕ ಮುಖಂಡರಾದ ಕೂಟಂಬಾರ ಅಬ್ದುಲ್ ರಹಿಮಾನ್ ದಾರಿಮಿ , ಅಬ್ದುಲ್ ರಶೀದ್ ಝೈನಿ, ಅಬ್ದುಲ್ ವಾಸಿಹ್ ಬಾಖವಿ, ಮುಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಸಹಿತ ಹಲವು ವಿದ್ವಾಂಸರು ಭಾಗವಹಿಸಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಮೇ 15 ರಂದು ಬೆಳಿಗ್ಗೆ 10 ಗಂಟೆಗೆ ಅಲ್ ಕನಫ್ ಓಲ್ಡ್ ಸ್ಟೂಡೆಂಟ್ ಸಮ್ಮಿಟ್, ಮಧ್ಯಾಹ್ನ ಎರಡು ಗಂಟೆಗೆ ಸನದುದಾನ ಮಹಾ ಸಮ್ಮೇಳನ, ರಾತ್ರಿ ಧಾರ್ಮಿಕ ಉಪನ್ಯಾಸ ಸಮಾರೋಪ ನಡೆಯಲಿದೆ.
ಮೇ 16 ರಂದು ಬೆಳಿಗ್ಗೆ 10 ಗಂಟೆಗೆ ಸಯ್ಯದ್ ಮದನಿ ಗ್ರ್ಯಾಂಡ್ ಮಸೀದಿಗೆ ಶಿಲಾನ್ಯಾಸ ನೆರವೇರಲಿದ್ದು, ಎಪಿ ಅಬೂಬಕ್ಕರ್ ಮುಸ್ಲಿಯಾರ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಅದೇ ದಿನ ಸಂಜೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಾಮಾಜಿಕ ಸಮಾವೇಶ ದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸ್ಪೀಕರ್ ಯುಟಿ ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ವಕ್ಫ್ ಸಚಿವ ಝಮೀರ್ ಅಹ್ಮದ್, ಪೌರಾಡಳಿತ ಸಚಿವ ರಹೀಮ್ ಖಾನ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಂಸದ ಬೃಜೇಶ್ ಚೌಟ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಅಲ್ಲದೇ ಈ ಕಾರ್ಯಕ್ರಮದ ಪ್ರಯುಕ್ತ ಎಪ್ರಿಲ್ 27 ರಂದು ಮಧ್ಯಾಹ್ನ 2 ಗಂಟೆಗೆ ದಅವಾ ಕಾಲೇಜು ಕಾನ್ಫರೆನ್ಸ್, ಮೇ2 ರಂದು ಸಂಜೆ 4 ಗಂಟೆಗೆ ತಾಜುಲ್ ಉಲಮಾ, ಕೂರತ್ ತಂಙಳ್ ಅನುಸ್ಮರಣೆ, ಅಬ್ದುಲ್ ಲತೀಫ್ ಸಖಾಫಿ ನೇತೃತ್ವದಲ್ಲಿ ಮದನೀಯಮ್ ದಿಕ್ರ್ ಮಜ್ಲಿಸ್, ಮೇ 3 ರಂದು ಸಂಜೆ 4 ಗಂಟೆಗೆ ಸಯ್ಯಿದ್ ಮದನಿ ನ್ಯಾಷನಲ್ ಪೀಸ್ ಕಾನ್ಫರೆನ್ಸ್, ಸಾಧಕರಿಗೆ ಸನ್ಮಾನ, ನೂರೇ ಅಜ್ಮೀರ್, ಮೇ 4 ರಂದು ಮಧ್ಯಾಹ್ನ ಎರಡು ಗಂಟೆಗೆ ಮದನಿ ಸಂಗಮ, ಮೇ6 ರಂದು ಮಧ್ಯಾಹ್ನ ಎರಡು ಗಂಟೆಗೆ ಶರೀಅತ್ ಕಾಲೇಜು ಕಾರ್ಯಕ್ರಮ, ಮೇ 8 ರಂದು ಮಧ್ಯಾಹ್ನ ಎರಡು ಗಂಟೆಗೆ ಮುಅಲ್ಲಿಮ್ ಸಮಾವೇಶ, ಮೇ9ರಂದು ಸಂಜೆ 4 ಗಂಟೆಗೆ ಮದನಿ ಮೌಲಿದ್ ಪಾರಾಯಣ, ಮೇ 12 ರಂದು ಮಧ್ಯಾಹ್ನ ಎರಡು ಗಂಟೆಗೆ ಸಯ್ಯಿದ್ ಮದನಿ ಹಿಪ್ಲುಲ್ ಕುರ್ಆನ್ ವಿದ್ಯಾರ್ಥಿಗಳ ಕಾರ್ಯಕ್ರಮ, ಮೇ 13 ರಂದು ಸಂಜೆ 4 ಗಂಟೆಗೆ ಗಲ್ಫ್ ಮೀಟ್, ಮೇ 17 ರಂದು ಸಂದಲ್ ಮೆರವಣಿಗೆ ಕಾರ್ಯಕ್ರಮ ಮೇ18 ರಂದು ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಉರೂಸ್ ಆರಂಭ ಆಗುವ ತಿಂಗಳ ಮೊದಲೇ ರಾಜ್ಯ, ಹೊರ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದು, ರಾಷ್ಟ್ರ ಮಟ್ಟದಲ್ಲೇ ದಕ್ಷಿಣ ಭಾರತದ ಅಜ್ಮೀರ್ ಎಂದು ಖ್ಯಾತಿ ಪಡೆದಿರುವ ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಉರೂಸ್ ಕಾರ್ಯಕ್ರಮಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ. ಪ್ರತಿ ದಿನ 50 ಸಾವಿರದಿಂದ 70 ಸಾವಿರ ಭಕ್ತಾದಿಗಳು ಆಗಮಿಸುತ್ತಾರೆ. ಮೇ18 ರಂದು ನಡೆಯುವ ಅನ್ನದಾನ ಕಾರ್ಯಕ್ರಮದಲ್ಲಿ ಐದು ಲಕ್ಷ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ಮುಕ್ಕಚೇರಿ ಉಪಸ್ಥಿತರಿದ್ದರು.