ಪುತ್ತೂರು | ಮಾರಕಾಯುಧ ಪ್ರದರ್ಶಿಸಿ ವಾಟ್ಸಾಪ್ ಸ್ಟೇಟಸ್; ಸಂಘಪರಿವಾರದ ಇಬ್ಬರು ಕಾರ್ಯಕರ್ತರ ಬಂಧನ
ತಲವಾರು ಹಿಡಿದು ಪೋಸು ಕೊಟ್ಟಿದ್ದ ಆರೋಪಿಗಳ ವಿರುದ್ಧ ಸುಮೊಟೋ ಪ್ರಕರಣ

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಮಾರಕಾಯುಧವಾದ ತಲ್ವಾರ್ ಹಿಡಿದುಕೊಂಡು ಪೋಸು ಕೊಟ್ಟಿದ್ದ ಸಂಘಪರಿವಾರದ ಇಬ್ಬರು ಕಾರ್ಯಕರ್ತರ ಫೊಟೋ ವೈರಲ್ ಆದ ಹಿನ್ನಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ದ ಸುಮೊಟೋ ಕೇಸ್ ದಾಖಲಿಸಿ ಬಂಧಿಸಿರುವ ಘಟನೆ ಗುರುವಾರ ನಡೆದಿದೆ.
ಬಂಧಿತರನ್ನು ಪುತ್ತೂರು ತಾಲೂಕಿನ ಕುರಿಯದ ಕಟ್ಟದ ಬೈಲಿನ ಸುಜಿತ್, ಆರ್ಯಾಪುವಿನ ಮರಿಕೆಯ ಪುಟ್ಟಣ್ಣ ಎಂದು ಗುರುತಿಸಲಾಗಿದೆ. ಆರೋಪಿಗಳು ತಲವಾರು ಹಿಡಿದಿರುವ ಫೊಟೋ ಹಾಕಿ ಸಮಯ ಎಂದು ಶೀರ್ಷಿಕೆ ಬರೆದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದರು.
ಆರೋಪಿಗಳು ತಲ್ವಾರ್ ಹಿಡಿದು ಫೊಟೋ ತೆಗೆದು ಅದನ್ನು ವಾಟ್ಸಪ್ನಲ್ಲಿ ಬುಧವಾರ ಸಂಜೆ ಅಪ್ಲೋಡ್ ಮಾಡಿದ್ದರು. ಈ ಫೊಟೋ ಸಾಕಷ್ಟು ವೈರಲ್ ಆಗಿತ್ತು. ಮಾರಕಾಯುಧವಾದ ತಲವಾರನ್ನು ಪ್ರದರ್ಶಿಸಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದರ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ತಡರಾತ್ರಿ ಅವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳ ಪೈಕಿ ಓರ್ವನಾದ ಸುಜಿತ್ ಅವರು ಈ ಹಿಂದೆ ಹಿಂದೂ ಜಾಗರಣಾ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರು ಸಾಮಾಜಿಕ ಜಾಲತಾಣದಲ್ಲಿ ತಲವಾರು ಪ್ರದರ್ಶನ ಮಾಡಿ ಬಂಧಿತರಾದ ಆರೋಪಿಗಳನ್ನು ಗುರುವಾರ ಸಂಜೆ ಪುತ್ತೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರುಗೊಳಿಸಿದೆ.