ಯಲ್ಲಾಪುರ ರಸ್ತೆ ಅಪಘಾತ: ವೈದ್ಯರ ನಿರ್ಲಕ್ಷ್ಯದಿಂದ ಗಾಯಾಳು ಸಾವು; ಕುಟುಂಬಸ್ಥರ ಆರೋಪ

ಹುಬ್ಬಳ್ಳಿ: ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಕಿಮ್ಸ್ ಆಸ್ಪತ್ರೆಯ ವೈದ್ಯರು ಹಿಂದೇಟು ಹಾಕಿದ್ದರಿಂದ ಸಾವು ಸಂಭವಿಸಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ.
ಕಿಮ್ಸ್ ವೈದ್ಯರು ಗಾಯಾಳುಗಳಿ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಮೊದಲು ಚೀಟಿ ಮಾಡಿಕೊಂಡು ಬನ್ನಿ, ಆಮೇಲೆ ಚಿಕಿತ್ಸೆ ಕೊಡುತ್ತೇವೆ ಎಂದು ಕಿಮ್ಸ್ ಸಿಬ್ಬಂದಿ ಹೇಳಿದ್ದಾಗಿ ಮೃತ ವ್ಯಕ್ತಿಯ ಸಂಬಂಧಿಕರು ತಿಳಿಸಿದ್ದಾರೆ.
ಉಳಿದ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಮ್ಸ್ ನಿರ್ದೇಶಕ ಎಸ್ ಎಫ್ ಕಮ್ಮಾರ್ ಅವರು, ಯಲ್ಲಾಪುರ ಅಪಘಾತದಲ್ಲಿ ಗಾಯಗೊಂಡ 11 ಜನ ಬಂದಿದ್ದರು, ಅದರಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ತೀರಿಹೋಗಿದ್ದರು. ಗಾಯಾಳುಗಳಿಗೆ ಬೇಕಾದ ಚಿಕಿತ್ಸೆ ಈಗಾಗಲೇ ನೀಡಲಾಗಿದೆ. ಡಾ.ರಾಜಶೇಖರ್ ನೇತೃತ್ವದ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. 24 ಅಥವಾ 48 ಗಂಟೆ ನಾವು ಏನು ಹೇಳಲಾಗಲ್ಲ. ಆದರೆ ಗಾಯಾಳುಗಳನ್ನು ಈಗ ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದೇವೆ ಎಂದು ತಿಳಿಸಿದರು.
ಚಿಕಿತ್ಸೆ ನೀಡಲು ಕಿಮ್ಸ್ ವೈದ್ಯರ ಹಿಂದೇಟು ಆರೋಪ ಬಗ್ಗೆ ಮಾತನಾಡಿದ ಅವರು, ಏಕಾಏಕಿ ಚಿಕಿತ್ಸೆಗಾಗಿ ಬಂದ 10 ಗಾಯಾಳುಗಳಿಗೆ ಮೊದಲು ಚಿಕಿತ್ಸೆ ನೀಡಲು ಸೂಚನೆ ನೀಡಿದ್ದೇನೆ. ಹೆಸರು, ಆಧಾರ್ ಕಾರ್ಡ್ ಕೇಳಿದ್ದು ಅಷ್ಟೇ, ಚಿಕಿತ್ಸೆಗೆ ಅಲ್ಲಾ ಉಳಿದ ಹಾಗೆ ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ ಎಂದು ಕಮ್ಮಾರ್ ಹೇಳಿದ್ದಾರೆ.